ನವದಹೆಲಿ: ನನ್ನ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗಿದ್ದು, ಜೈಲಿಗೆ ಕಳುಹಿಸಿ ಗುಜರಾತ್ ನಿಂದ ನನ್ನ ದೂರವಿಡುವುದೇ ಬಿಜೆಪಿ ಉದ್ದೇಶ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಮವಾರ ಹೇಳಿದ್ದಾರೆ.
ಇಂದು ಸಿಬಿಐ ವಿಚಾರಣೆಗೆ ಹೋಗುವ ಮುನ್ನ ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷದ ನಾಯಕ ಸಿಸೋಡಿಯಾ, 'ನನ್ನ ವಿರುದ್ಧ ಸುಳ್ಳು ಪ್ರಕರಣ ಹಾಕಿ ಬಂಧಿಸಲು ಸಂಚು ರೂಪಿಸಲಾಗಿದೆ' ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಳೆ ಮನೀಶ್ ಸಿಸೋಡಿಯಾ ಬಂಧನ: ಸಿಬಿಐ ಸಮನ್ಸ್ ನಂತರ ಎಎಪಿ
ಸಂಪೂರ್ಣ ಸುಳ್ಳು ಮೊಕದ್ದಮೆ ಹೂಡಲಾಗಿದೆ. ನನ್ನ ಮನೆಗೆ ದಾಳಿ ನಡೆಸಿದರು. ಆದರೆ ಏನೂ ಸಿಗಲಿಲ್ಲ. ನನ್ನ ಬ್ಯಾಂಕ್ ಲಾಕರ್ಗಳನ್ನು ಹುಡುಕಿದರು. ಆಗಲೂ ಏನೂ ಸಿಗಲಿಲ್ಲ. ನನ್ನ ಹಳ್ಳಿಗೆ ಹೋಗಿ ಶೋಧ ನಡೆಸಿದರು. ಅಲ್ಲೂ ಏನೂ ಪತ್ತೆಯಾಗಿಲ್ಲ. ಇವೆಲ್ಲವೂ ಸುಳ್ಳು ಪ್ರಕರಣ ಮಾತ್ರವಾಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಾನು ಗುಜರಾತ್ಗೆ ಹೋಗಬೇಕಿತ್ತು. ಅವರು ಗುಜರಾತ್ನಲ್ಲಿ ಹಿನ್ನಡೆ ಎದುರಿಸುತ್ತಿದ್ದಾರೆ. ಗುಜರಾತ್ನಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗದಂತೆ ನನ್ನ ತಡೆಯುವುದೇ ಅವರ ಉದ್ದೇಶ. ನನ್ನನ್ನು ಜೈಲಿಗೆ ಕಳುಹಿಸಿದರೂ ಗುಜರಾತ್ನಲ್ಲಿ ಚುನಾವಣಾ ಪ್ರಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಗುಜರಾತಿಯೂ ಉತ್ತಮ ಶಾಲೆ, ಆಸ್ಪತ್ರೆ, ಉದ್ಯೋಗ ಹಾಗೂ ವಿದ್ಯುತ್ ಗಾಗಿ ಪ್ರಚಾರ ನಡೆಸುತ್ತಿದ್ದಾರೆ. ಗುಜರಾತ್ನಲ್ಲಿ ಮುಂಬರುವ ಚುನಾವಣೆ ಒಂದು ಅಂದೋಲನವಾಗಲಿದೆ ಎಂದು ಹೇಳಿದರು.
ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ಆರೋಪದ ಪ್ರಕರಣದಲ್ಲಿ, ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಭಾನುವಾರ ಸಮನ್ಸ್ ಜಾರಿಗೊಳಿಸಿರುವ ಸಿಬಿಐ, ತನಿಖೆಗಾಗಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು.
Advertisement