ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ತನ್ನದೇ ವಿವಾಹವನ್ನು ತಡೆದ ಅಪ್ರಾಪ್ತೆ; ನರ್ಸ್ ಆಗುವ ಕನಸು

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ದೂರದ ಹಳ್ಳಿಯೊಂದರ 15 ವರ್ಷದ ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಸಮಯೋಚಿತ ದೂರವಾಣಿ ಕರೆ ಮಾಡುವ ಮೂಲಕ ತನ್ನ ಮದುವೆಯನ್ನು ತಡೆದಿದ್ದಾಳೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪುರುಲಿಯಾ: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ದೂರದ ಹಳ್ಳಿಯೊಂದರ 15 ವರ್ಷದ ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಸಮಯೋಚಿತ ದೂರವಾಣಿ ಕರೆ ಮಾಡುವ ಮೂಲಕ ತನ್ನ ಮದುವೆಯನ್ನು ತಡೆದಿದ್ದಾಳೆ.

ಸಾಮಾಜಿಕ ಅನಿಷ್ಟಗಳ ಬಗ್ಗೆ ಜಾಗೃತಿ ಮೂಡಿಸುವ ಸ್ಥಳೀಯ 'ಕನ್ಯಾಶ್ರೀ' ಕ್ಲಬ್‌ನ ಸದಸ್ಯೆಯಾಗಿದ್ದ ಕಾಶಿಪುರ ಪ್ರದೇಶದ ಪೂರ್ಣಿಮಾ ಲೋಹರ್‌ಗೆ (ಹೆಸರು ಬದಲಾಯಿಸಲಾಗಿದೆ) ಹುಡುಗಿಯರು ಮದುವೆಯಾಗಲು 18 ವರ್ಷ ಕಾನೂನುಬದ್ಧ ವಯಸ್ಸು ಎಂದು ಚೆನ್ನಾಗಿ ತಿಳಿದಿತ್ತು.

ಕೋಲ್ಕತ್ತಾದಿಂದ ದೂರದ ದೋಬಪಾರಾದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಆಗಾಗ್ಗೆ ಭೇಟಿ ನೀಡಿದಾಗ ಆಶಾ ಮತ್ತು ಯುನಿಸೆಫ್ ತರಬೇತುದಾರರಿಂದ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದು ಲೋಹರ್ ಹೇಳಿದರು.

ಕೆಲವು ತಿಂಗಳುಗಳ ಹಿಂದೆ, ತಾನು ಶೀಘ್ರದಲ್ಲೇ ಬಲಿಪಶುವಾಗಬಹುದೆಂದು ಅರಿತುಕೊಂಡ ನಂತರ, ಆಕೆ ತ್ವರಿತವಾಗಿ 1098 ಗೆ ಡಯಲ್ ಮಾಡಿ ಚೈಲ್ಡ್‌ಲೈನ್‌ಗೆ ತಿಳಿಸಿದ್ದು, ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಮತ್ತು ನರ್ಸ್ ಆಗಲು ಬಯಸಿದ್ದರೂ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.

'ನಾನು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ತಕ್ಷಣ, ಯಾರೋ ನನ್ನ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಕೇಳಿದರು. ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ನಂತರ ನನ್ನ ಮನೆಗೆ ಭೇಟಿ ನೀಡಿದರು ಮತ್ತು ನಾನು ಅಪ್ರಾಪ್ತೆಯಾಗಿರುವುದರಿಂದ ನನಗೆ ಮದುವೆ ಮಾಡದಂತೆ ನನ್ನ ಪೋಷಕರ ಮನವೊಲಿಸಿದರು' ಎಂದು ಲೋಹರ್ ಕಾಶಿಪುರದ ಅಂಗನವಾಡಿ ಕೇಂದ್ರದಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಆಕೆಯ ನಡೆಯಿಂದ ಪೋಷಕರು ಕೋಪಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, 'ಮೊದಲು ಅವರು ಅಸಮಾಧಾನಗೊಂಡರು, ಆದರೆ, ಅಪ್ರಾಪ್ತೆ ಏಕೆ ಮದುವೆಯಾಗಬಾರದು ಎಂದು ಅಧಿಕಾರಿಗಳು ಅವರಿಗೆ ವಿವರಿಸಿದ ನಂತರ, ಅವರು ನನ್ನ ವಿದ್ಯಾಬ್ಯಾಸವನ್ನು ಮುಂದುವರಿಸಲು ಅವಕಾಶ ನೀಡಿದರು. ನನಗೆ ನರ್ಸ್ ಆಗಲು ಇಷ್ಟ ಎಂದರು.

'ಕೋವಿಡ್-19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ನನ್ನ ತಂದೆ ತನ್ನ ಕೆಲಸವನ್ನು ಕಳೆದುಕೊಂಡರು ಮತ್ತು ಕುಟುಂಬಕ್ಕೆ ನಾನು ಹೊರೆಯಾಗಿದ್ದೇನೆ ಎಂದು ಪರಿಗಣಿಸಿದ್ದರು. ಆದರೆ ಈಗ, ಮಗಳು ಕೂಡ ಒಂದು ಆಸ್ತಿ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ' ಎಂದು ಅವರು ಹೇಳಿದರು.

ಯುನಿಸೆಫ್ ಮಕ್ಕಳ ರಕ್ಷಣಾ ಅಧಿಕಾರಿ ಸ್ವಪ್ನೋದೀಪ ಬಿಸ್ವಾಸ್ ಮಾತನಾಡಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಂಸ್ಥೆಯು ಕಾಶಿಪುರ್, ಝಲ್ಡಾ ಮತ್ತು ಪುರುಲಿಯಾ ಜಿಲ್ಲೆಯ ಇತರ ಭಾಗಗಳಲ್ಲಿ ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿದೆ. ಇಲ್ಲಿ ಮುಟ್ಟಿನ ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಟಗಳನ್ನು ತಡೆಯಲು ಪಶ್ಚಿಮ ಬಂಗಾಳ ಸರ್ಕಾರದ ಪ್ರಮುಖ ಯೋಜನೆಯಾದ 'ಕನ್ಯಾಶ್ರೀ'ಯಂತಹ ಯೋಜನೆಗಳನ್ನು ಬಲಪಡಿಸಲು ಯುನಿಸೆಫ್ ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ. ಪುರುಲಿಯಾ ಸೇರಿದಂತೆ ಪಶ್ಚಿಮ ಬಂಗಾಳದ 12 ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು 'ಕನ್ಯಾಶ್ರೀ' ಕ್ಲಬ್‌ಗಳ ರಚನೆಯೊಂದಿಗೆ ಜಿಲ್ಲಾಡಳಿತಕ್ಕೆ ಸಹಾಯ ಮಾಡುತ್ತಿದೆ.

ಕನ್ಯಾಶ್ರೀ ಕ್ಲಬ್‌ಗಳು ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಹುಡುಗಿಯರಲ್ಲಿ ಆರೋಗ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ರಚಿಸಲಾದ ಗುಂಪುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com