ಮಲಪ್ಪುರಂ: ಉತ್ತರ ಕೇರಳ ಜಿಲ್ಲೆಯ ವಂಡೂರ್ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಓಣಂ ಆಚರಿಸುತ್ತಿರುವ ಕಿರು ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಟ್ವೀಟ್ ಮಾಡಿ 'ಲೈಕ್' ಮಾಡಿದ್ದಾರೆ.
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಮತ್ತು ವೀಕ್ಷಿಸುತ್ತಿರುವ ಈ ವೀಡಿಯೊದಲ್ಲಿ ವಂಡೂರಿನ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ ಹಲವಾರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಸೀರೆ ಧರಿಸಿ ಸಂಗೀತಕ್ಕೆ ನೃತ್ಯ ಮಾಡುವುದನ್ನು ಮತ್ತು ಅವರ ಇತರ ಓಣಂ ಆಚರಿಸುತ್ತಿರುವುದನ್ನು ಕಾಣಬಹುದು.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನರು ಪ್ರಶಂಸಿಸಿದ್ದಾರೆ. ಕೆಲವರು ಇದನ್ನು ನೆರೆಯ ರಾಜ್ಯವಾದ ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಹೋಲಿಸಿದ್ದಾರೆ. ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರಿಗೆ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಉಡುಪಿಯ ವಿದ್ಯಾರ್ಥಿನಿಯರು ಕೋರ್ಟ್ ಮೊರೆ ಹೋಗಿ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದು ಪ್ರಕರಣ ಈಗ ಸುಪ್ರೀಂ ಕೋರ್ಟ್ ನಲ್ಲಿದೆ.
ಮಲಪ್ಪುರಂನ ವಂಡೂರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಆಚರಣೆ. ಓಣಂ ಅನ್ನು ಹಿಂದೂ ಹಬ್ಬ ಎಂದು ಹೇಳುವ ಕೀಳು ಮಟ್ಟದ ಆಲೋಚನೆ ಹೊಂದಿರುವವರು ಮತ್ತು ಹಿಜಾಬ್ಗೆ ಶಿಕ್ಷಣವನ್ನು ನಿರಾಕರಿಸಿದ ನಮ್ಮ ನೆರೆಯ ರಾಜ್ಯ ಕರ್ನಾಟಕಕ್ಕೆ ಸಮರ್ಪಿಸಲಾಗಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನ್ನು ಲೈಕ್ ಮಾಡಿರುವ ಸಾವಿರಾರು ಮಂದಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಒಬ್ಬರು.
ವಂಡೂರಿನ ಶಾಸಕ ಎಪಿ ಅನಿಲ್ ಕುಮಾರ್ ತಮ್ಮ ಫೇಸ್ಬುಕ್ ಪುಟದಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.ಸ್ವೀಡನ್ನ ಉಪ್ಸಲಾ ವಿಶ್ವವಿದ್ಯಾನಿಲಯದಲ್ಲಿ ಶಾಂತಿ ಮತ್ತು ಸಂಘರ್ಷ ಸಂಶೋಧನೆಯ ಪ್ರಾಧ್ಯಾಪಕ ಅಶೋಕ್ ಸ್ವೈನ್ ಅವರು “ಕೇರಳದ ಶಾಲೆಯಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಂದ ಓಣಂ ಆಚರಿಸಲಾಗುತ್ತಿದೆ, ಓಣಂ ಕೇರಳದ ಜನರ ಹಬ್ಬವಾದರೂ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ ಹಬ್ಬವಲ್ಲ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಹಬ್ಬಗಳನ್ನು ನಿರ್ಬಂಧಿಸಿದ ನಂತರ ಈ ವರ್ಷ ರಾಜ್ಯದಲ್ಲಿ ಓಣಂ ನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ.
Advertisement