ಸರಿಯಾಗಿ ಆಹ್ವಾನ ನೀಡಿಲ್ಲದ ಕಾರಣ ದೆಹಲಿಯ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗಲ್ಲ: ಮಮತಾ ಬ್ಯಾನರ್ಜಿ

ಸರಿಯಾಗಿ ಆಹ್ವಾನ ನೀಡಿಲ್ಲದ ಕಾರಣ ಇಂದು ದೆಹಲಿಯಲ್ಲಿ ನಡೆಯಲಿರುವ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಸರಿಯಾಗಿ ಆಹ್ವಾನ ನೀಡಿಲ್ಲದ ಕಾರಣ ಇಂದು ದೆಹಲಿಯಲ್ಲಿ ನಡೆಯಲಿರುವ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸುವ ಪತ್ರ ಅಧಿಕಾರಶಾಹಿಗಳಿಂದ ನೆನ್ನೆ ಬಂದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹೇಳಿದ್ದಾರೆ.

ಇಂದು ಸಂಜೆ 7 ಗಂಟೆಗೆ ನೇತಾಜಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ ಮತ್ತು ನೀವು ಸಂಜೆ 6 ಗಂಟೆಗೆ ಅಲ್ಲಿರಬೇಕು ಎಂದು ನಿನ್ನೆ ಅಧೀನ ಕಾರ್ಯದರ್ಶಿಯಿಂದ ನನಗೆ ಪತ್ರ ಬಂದಿದೆ. ಆ ಪತ್ರದಲ್ಲಿ ಹೇಳಿರುವುದು ನನಗೆ ಆದೇಶ ನೀಡಿದಂತಿದೆ. ಹಾಗಿದ್ದರೆ, ನಾನೇನು ಅವರ ಸೇವಕಿಯೇ? ಅಧೀನ ಕಾರ್ಯದರ್ಶಿಯೊಬ್ಬರು ಮುಖ್ಯಮಂತ್ರಿಗೆ ಹೀಗೆ ಪತ್ರ ಬರೆಯಬಹುದೇ? ಸಂಸ್ಕೃತಿ ಸಚಿವರು ತುಂಬಾ ದೊಡ್ಡವರಾಗಿದ್ದಾರೆಯೇ?' ಎಂದು ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಪಕ್ಷದ ಸಭೆಯೊಂದರಲ್ಲಿ ಹೇಳಿದರು.

'ಅದಕ್ಕಾಗಿಯೇ ನಾನು ಇಂದು ಮಧ್ಯಾಹ್ನ ಇಲ್ಲಿನ ನೇತಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದ್ದೇನೆ' ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ರಾಜಪಥ ರಸ್ತೆಯನ್ನು 'ಕರ್ತವ್ಯ ಪಥ' ಎಂದು ಮರುನಾಮಕರಣ ಮಾಡುವುದರೊಂದಿಗೆ ನವೀಕರಿಸಿದ ಸೆಂಟ್ರಲ್ ವಿಸ್ತಾವನ್ನು ಉದ್ಘಾಟಿಸಲಿದ್ದಾರೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಲು ಆಹ್ವಾನ ನೀಡದಿರುವ ಬಗ್ಗೆ ಮಮತಾ ಬ್ಯಾನರ್ಜಿ ಅವರು ದೂರಿದ್ದಾರೆ. 'ಬಾಂಗ್ಲಾ ಪ್ರಧಾನಿ ಇಲ್ಲಿಗೆ ಬಂದಿರುವುದು ಇದೇ ಮೊದಲು ಮತ್ತು ಇದರಿಂದ ಬಂಗಾಳವನ್ನು ಹೊರಗಿಡಲಾಗಿದೆ. ಹಸೀನಾ ಜಿ ನನ್ನನ್ನು ಭೇಟಿಯಾಗಬೇಕೆಂದು ಬಯಸಿದ್ದರು ಎಂಬುದನ್ನು ನಾನು ಕೇಳಿದೆ. ಅವರ ಕುಟುಂಬದೊಂದಿಗೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ' ಎಂದು ಮಮತಾ ಆರೋಪಿಸಿದ್ದಾರೆ.

ಶೇಖ್ ಹಸೀನಾ ಅವರನ್ನು ಭೇಟಿಯಾಗುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಏಕೆ 'ಚಿಂತಿತವಾಗಿದೆ' ಎಂಬ ಕುತೂಹಲ ನನಗಿದೆ ಎಂದೂ ಅವರು ಹೇಳಿದರು.

'ನಾನು ಬಾಹ್ಯ ವ್ಯವಹಾರಗಳು ಅಥವಾ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಯಾವುದೇ ವಿದೇಶ ನನ್ನನ್ನು ಆಹ್ವಾನಿಸಿದಾಗ ಕೇಂದ್ರವು ನನ್ನನ್ನು ತಡೆಯಲು ಪ್ರಯತ್ನಿಸುವುದನ್ನು ನಾನು ಗಮನಿಸಿದ್ದೇನೆ. ನಾನು ವಿದೇಶದ ಗಣ್ಯರು ಭೇಟಿಯಾದರೆ ಕೇಂದ್ರ ಸರ್ಕಾರ ಏಕೆ ಚಿಂತಿಸುತ್ತದೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com