ತನಗೆ ಕಡಿದ ಹಾವನ್ನು ಕಚ್ಚಿ ಸಾಯಿಸಿದ ಒಡಿಶಾದ ವ್ಯಕ್ತಿ, ಆಸ್ಪತ್ರೆಗೆ ತೆರಳದೆ ತಾನೇ ವಿಷವನ್ನು ತೆಗೆದಿದ್ದಾಗಿ ಹೇಳಿಕೆ!
ಬಾಲಸೋರ್: ಬಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ದಾರದಾ ಗ್ರಾಮದ ಸಲೀಲ್ ನಾಯಕ್ ಎಂಬಾತ ಸಿಟ್ಟಿನ ಭರದಲ್ಲಿ ನಾಗರಹಾವನ್ನು ಕೊಂದಿದ್ದಾನೆ. ಸರೀಸೃಪವು ತನ್ನ ಕಾಲಿಗೆ ಕುಟುಕಿದ್ದರಿಂದ ತಾನು ಅದನ್ನು ಕಚ್ಚಿ ಕೊಂದಿದ್ದಾನೆ. ಮಂಗಳವಾರ ಈ ಘಟನೆ ನಡೆದಿದ್ದು, ಸತ್ತ ಹಾವನ್ನು ಕೊರಳಿಗೆ ನೇತು ಹಾಕಿಕೊಂಡು ನಾಯಕ್ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಉಂಟಾಗಿದ್ದ ಪ್ರವಾಹದ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಸಲೀಲ್ ತನ್ನ ಕೃಷಿಭೂಮಿಗೆ ಹೋಗುತ್ತಿದ್ದಾಗ ನಾಗರಹಾವು ಆತನ ಎಡಗಾಲಿಗೆ ಕಚ್ಚಿದೆ. ಇದರಿಂದ ಕೋಪಗೊಂಡ ಆತ, ಕಚ್ಚಿ ತಪ್ಪಿಸಿಕೊಂಡಿದ್ದ ಹಾವನ್ನು ಹುಡುಕಿ ಹಿಡಿದುಕೊಂಡಿದ್ದಾನೆ. ಬಳಿಕ ಅದು ಸಾಯುವವರೆಗೂ ಕಚ್ಚಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಸತ್ತ ನಾಗರ ಹಾವನ್ನು ಕೊರಳಿಗೆ ನೇತುಹಾಕಿಕೊಂಡು ದಾರದಾ ಮಾರುಕಟ್ಟೆಗೆ ತೆರಳಿದ್ದಾನೆ. ಇದನ್ನು ಕಂಡು ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಹೋಗುವಂತೆ ಸೂಚಿಸಿದಾಗ ತಾನೊಬ್ಬ ಮಾಂತ್ರಿಕ ಎಂದು ಹೇಳಿ ಮಂತ್ರಘೋಷ ಹಾಕಿ ವಿಷವನ್ನು ಹೊರತೆಗೆದಿದ್ದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಹಾವು ಕಚ್ಚಿ ಉರಗ ತಜ್ಞ ಸ್ನೇಕ್ ಲೋಕೇಶ್ ನಿಧನ
ಬಾಲಸೋರ್ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್ಒ) ಆಯುಷ್ ಜೈನ್ ಅವರು ಮಾಹಿತಿ ಪಡೆದ ನಂತರ, ಅರಣ್ಯ ಸಿಬ್ಬಂದಿ ಸಲೀಲ್ನನ್ನು ಒಂದು ದಿನದ ಮಟ್ಟಿಗೆ ಬಂಧಿಸಿ ಅಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಬುಧವಾರ ಬಿಡುಗಡೆ ಮಾಡಿದ್ದಾರೆ.
'ಸಲೀಲ್ ದೈಹಿಕವಾಗಿ ಸದೃಢವಾಗಿದ್ದರೂ ಮಾನಸಿಕವಾಗಿ ಅಸ್ವಸ್ಥ ಎಂದು ವರದಿಯಾಗಿದೆ. ಹೀಗಾಗಿ ಆತನನ್ನು ನೋಡಿಕೊಳ್ಳುವಂತೆ ಅವರ ಕುಟುಂಬಕ್ಕೆ ಸಲಹೆ ನೀಡಲಾಗಿದೆ' ಎಂದು ಜೈನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ