ಪೈಲಟ್‌ ಮುಖ್ಯಮಂತ್ರಿಯಾಗಲು ಗೆಹ್ಲೋಟ್ ಬಣ ಅಡ್ಡಿ; ರಾಜಸ್ಥಾನದ ಬಿಕ್ಕಟ್ಟು ಶಮನಕ್ಕೆ ಕಮಲ್ ನಾಥ್ ಮುಂದಾಗುವ ಸಾಧ್ಯತೆ

ರಾಜಸ್ಥಾನ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನಗಳು ವಿಫಲವಾದ ನಂತರ ರಾಜಸ್ಥಾನದಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮೂಲವೊಂದು ಸೋಮವಾರ ತಿಳಿಸಿದೆ.
ಅಶೋಕ್ ಗೆಹ್ಲೋಟ್-ಕಮಲ್ ನಾಥ್- ಸಚಿನ್ ಪೈಲಟ್
ಅಶೋಕ್ ಗೆಹ್ಲೋಟ್-ಕಮಲ್ ನಾಥ್- ಸಚಿನ್ ಪೈಲಟ್

ನವದೆಹಲಿ: ರಾಜಸ್ಥಾನ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನಗಳು ವಿಫಲವಾದ ನಂತರ ರಾಜಸ್ಥಾನದಲ್ಲಿ ಪೂರ್ಣ ಪ್ರಮಾಣದ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಲು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮೂಲವೊಂದು ಸೋಮವಾರ ತಿಳಿಸಿದೆ.

ರಾಜಸ್ಥಾನದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಸಭೆ ನಡೆಸಲು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಜೈಪುರದಲ್ಲಿರುವ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅವರು ಸೋಮವಾರ ದೆಹಲಿಗೆ ತೆರಳುವ ಮೊದಲು, ಅಶೋಕ್ ಗೆಹ್ಲೋಟ್ ಬಣದ ಮೂವರು ಅನೇಕ ಪ್ರಸ್ತಾಪಗಳೊಂದಿಗೆ ತಮ್ಮನ್ನು ಭೇಟಿ ಮಾಡಿದ್ದರು. ಆದರೆ, ಹಿತಾಸಕ್ತಿಗಳ ಘರ್ಷಣೆಯನ್ನು ತಪ್ಪಿಸಲು ಅದನ್ನು ತಿರಸ್ಕರಿಸಬೇಕಾಗಿತ್ತು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಗೆಹ್ಲೋಟ್ ಬಣವನ್ನು ಪ್ರತಿನಿಧಿಸುವ ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಪ್ರತಾಪ್ ಖಚ್ರಿಯಾವಾಸ್ ಅವರು ಮೂರು ಪ್ರಸ್ತಾಪಗಳೊಂದಿಗೆ ಭಾನುವಾರ ರಾತ್ರಿ ಮಾಕೆನ್ ಅವರನ್ನು ಭೇಟಿ ಮಾಡಿದರು ಮತ್ತು ಹೊಸ ಸಿಎಂ ಆಗಿ ಸಚಿನ್ ಪೈಲಟ್‌ ಅವರಿಗೆ ಅವಕಾಶ ನೀಡುವುದಕ್ಕೆ ಒಪ್ಪುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾಗಿ ಮಾಕೆನ್ ಹೇಳಿದರು.

ಮೂರು ಪ್ರಸ್ತಾವನೆಗಳು ಹೀಗಿವೆ...

ಮೊದಲ ಪ್ರಸ್ತಾವನೆಯಲ್ಲಿ, 'ಹೊಸ ಮುಖ್ಯಮಂತ್ರಿ ಆಯ್ಕೆಯ ನಿರ್ಣಯವನ್ನು ಅಂಗೀಕರಿಸಲು ಬಯಸಿದರೆ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದನ್ನು ಅಕ್ಟೋಬರ್ 19 ರ (ಪಕ್ಷದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ) ನಂತರ ಅಂಗೀಕರಿಸಬೇಕು ಎಂದಿದ್ದಾರೆ.

'ಇದು ಹಿತಾಸಕ್ತಿ ಸಂಘರ್ಷವನ್ನು ಹುಟ್ಟುಹಾಕುತ್ತದೆ. ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ಈ ಪ್ರಸ್ತಾಪವು ಅಕ್ಟೋಬರ್ 19ರ ನಂತರ ಅವರಿಗೆ ಮತ್ತಷ್ಟು ಅಧಿಕಾರವನ್ನು ನೀಡುತ್ತದೆ ಮತ್ತು ಇದಕ್ಕಿಂತ ದೊಡ್ಡ ಹಿತಾಸಕ್ತಿ ಸಂಘರ್ಷ ಇನ್ನೊಂದಿಲ್ಲ ಎಂದು ನಾವು ಅವರಿಗೆ ಹೇಳಿದ್ದೇವೆ ಎಂದು ಮಾಕೆನ್ ತಿಳಿಸಿದ್ದಾರೆ.

ಎರಡನೆಯದಾಗಿ, ಬಂಡಾಯ ಶಾಸಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಅವರ ಮನವೊಲಿಸಲು ಪ್ರಯತ್ನಿಸಬೇಕೆಂದು ಸೋನಿಯಾ ಗಾಂಧಿ ಸೂಚನೆ ಮೇರೆಗೆ ಗೆಹ್ಲೋಟ್ ಬಣದ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಬಯಸುತ್ತೇವೆ ಎಂದಾಗ, ಅವರು ಇಡೀ ಬಣದೊಂದಿಗೆ ಒಟ್ಟಾಗಿ ಮಾತನಾಡಲು ಒತ್ತಾಯಿಸಿದರು. ಪ್ರತಿ ನಾಯಕರಿಂದ ಪ್ರತಿಕ್ರಿಯೆಯನ್ನು ಪಡೆಯುವುದು ಕಾಂಗ್ರೆಸ್‌ನ ಅಭ್ಯಾಸ ಎಂದು ನಾವು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ, ಅವರು ಬಣದಲ್ಲಿ ಕೇಳಿ ಬರುವ ನಿರ್ಧಾರವನ್ನೇ 'ನೀವು ಇದನ್ನು ಸಾರ್ವಜನಿಕವಾಗಿ ಘೋಷಿಸಬೇಕು' ಎಂದು ಹೇಳಿದರು.

ಮೂರನೆಯದಾಗಿ, 2020ರ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಉಂಟಾದ ಬಂಡಾಯದ ವೇಳೆ ಪಕ್ಷಕ್ಕೆ ನಿಷ್ಠರಾಗಿದ್ದ 102 ಶಾಸಕರ ಪೈಕಿಯೇ ಹೊಸ ಸಿಎಂ ಆಯ್ಕೆಯಾಗಬೇಕು ಹೊರತು ಪೈಲಟ್ ಅವರ ಗುಂಪಿನಿಂದಲ್ಲ ಎಂದು ಹೇಳಿದ್ದಾರೆ ಎಂದು ಮಾಕೆನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com