ನವರಾತ್ರಿ: ಉಚಿತ ಪಡಿತರ ಯೋಜನೆ ಡಿಸೆಂಬರ್ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ!

ನವರಾತ್ರಿ ಹಬ್ಬಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಉಚಿತ ಪಡಿತರ ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಮೂರು ತಿಂಗಳವರೆಗೆ ವಿಸ್ತರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನವರಾತ್ರಿ ಹಬ್ಬಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಉಚಿತ ಪಡಿತರ ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಮೂರು ತಿಂಗಳವರೆಗೆ ವಿಸ್ತರಿಸಿದೆ. 

ಹೌದು.. ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಮ್ಮೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY)ಯನ್ನು ಇನ್ನೂ 3 ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನ ಪಡೆಯಲಿದ್ದಾರೆ.

ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. 44,700 ಕೋಟಿ ವೆಚ್ಚದಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲಾಗುವುದು. ಶುಕ್ರವಾರದಂದು ಕೊನೆಗೊಳ್ಳಲಿರುವ 80 ಕೋಟಿ ಬಡವರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯು ಈಗ ಡಿಸೆಂಬರ್ 31, 2022 ರವರೆಗೆ ಜಾರಿಯಲ್ಲಿದೆ ಎಂದು ಹೇಳಿದರು.

80 ಕೋಟಿ ಜನರಿಗೆ ಪ್ರಯೋಜನ
ಕೇಂದ್ರ ಸರ್ಕಾರ ಈ ಯೋಜನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಇದು ನೇರವಾಗಿ 80 ಕೋಟಿ ಜನರಿಗೆ ಪ್ರಯೋಜನ ನೀಡುತ್ತದೆ. ಸರ್ಕಾರದಿಂದ ಈ ಯೋಜನೆ ಹೆಚ್ಚಿಸುವ ಸುಳಿವು ಈಗಾಗಲೇ ನೀಡಲಾಗಿತ್ತು. ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿಯೂ ಈ ಬಗ್ಗೆ ಸೂಚಿಸಿದ್ದರು. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ವಿಶ್ವದ ಅತಿದೊಡ್ಡ ಆಹಾರ ಯೋಜನೆಯಾಗಿದೆ.

ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಬರೋಬ್ಬರಿ 3.40 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಈ ಕೇಂದ್ರ ಯೋಜನೆಯಡಿ ದೇಶದ ಎಲ್ಲಾ ಬಡ ಪಡಿತರ ಚೀಟಿದಾರರ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರವನ್ನು ನೀಡಲಾಗುತ್ತದೆ. ಆರಂಭದಲ್ಲಿ 1 ಕುಟುಂಬಕ್ಕೆ 1KG ಬೇಳೆ ಮತ್ತು ಅಗತ್ಯ ಮಸಾಲೆಗಳ ಕಿಟ್ ನೀಡಲಾಗಿತ್ತು.

2020ರ ಏಪ್ರಿಲ್‍ನಲ್ಲಿ ಯೋಜನೆ ಪ್ರಾರಂಭ
ಕೇಂದ್ರ ಸರ್ಕಾರವು ಏಪ್ರಿಲ್ 2020ರಲ್ಲಿ ಕೋವಿಡ್ ಅವಧಿಯಲ್ಲಿ ಈ ಯೋಜನೆ ಪ್ರಾರಂಭಿಸಿತು. ನಂತರ ಮಾರ್ಚ್ 2022ರಲ್ಲಿ 6 ತಿಂಗಳವರೆಗೆ ಅಂದರೆ ಸೆಪ್ಟೆಂಬರ್‍ವರೆಗೆ ವಿಸ್ತರಿಸಲಾಯಿತು. ಇದೀಗ ಸರ್ಕಾರ ಮತ್ತೊಮ್ಮೆ 2022ರ ಡಿಸೆಂಬರ್‌ವರೆಗೆ 3 ತಿಂಗಳ ಕಾಲ ವಿಸ್ತರಿಸಿದೆ.

ರೈಲ್ವೆ ಪರಿಷ್ಕರಣೆ
ಇನ್ನು ಭಾರತೀಯ ರೈಲ್ವೆಯ ಪರಿವರ್ತನೆಗಾಗಿ ಸರ್ಕಾರವು 10,000 ಕೋಟಿ ಎಸ್‌ಒಪಿಯನ್ನು ಘೋಷಿಸಿದೆ. ಕೇಂದ್ರ ಸಚಿವ ಸಂಪುಟವು ಮೂರು ಪ್ರಮುಖ ರೈಲು ನಿಲ್ದಾಣಗಳಾದ ನವದೆಹಲಿ, ಅಹಮದಾಬಾದ್ ಮತ್ತು ಸಿಎಸ್ ಎಂಟಿ ಮುಂಬೈ ಮರು ಅಭಿವೃದ್ಧಿಯ ಪ್ರಸ್ತಾಪವನ್ನು ಅನುಮೋದಿಸಿದೆ. ಈ ಯೋಜನೆಯು ಸುಮಾರು 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಒಳಗೊಂಡಿರುತ್ತದೆ. ರೈಲ್ವೆ ನೌಕರರಿಗೆ 78 ದಿನಗಳ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 11 ಲಕ್ಷ ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com