ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಪರೋಪಕಾರಿ ಸುಧಾ ಮೂರ್ತಿ ಅವರಿಗೆ 2023ನೇ ಸಾಲಿನಲ್ಲಿ ಸಾಮಾಜಿಕ ಕಾರ್ಯಕ್ಕೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ, ಇತರ ಗಣ್ಯರು ಹಾಗೂ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಗುತ್ತಾ ಸುಧಾಮೂರ್ತಿ ಪ್ರಶಸ್ತಿ ಸ್ವೀಕರಿಸಿದರು.
ಸುಧಾಮೂರ್ತಿಯವರ ಪುತ್ರಿ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಕಾರ್ಯಕ್ರಮಕ್ಕೆ ಬಂದು ಗಣ್ಯರ ಮಧ್ಯೆ ಕುಳಿತು ಅಮ್ಮ ರಾಷ್ಟ್ರಪತಿಗಳ ಕೈಯಿಂದ ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ತುಂಬಿಕೊಂಡರು.
ಸುಧಾಮೂರ್ತಿಯವರ ಪತಿ ಎನ್ ಆರ್ ನಾರಾಯಣ ಮೂರ್ತಿ, ಪುತ್ರ ರೋಹನ್ ಮೂರ್ತಿ, ಸುಧಾಮೂರ್ತಿಯವರ ಸೋದರಿ ಡಾ ಸುನಂದಾ ಕುಲಕರ್ಣಿಯವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಸುಧಾ ಮೂರ್ತಿ, ಈ ಪ್ರಶಸ್ತಿಗೆ ನಾನು ಭಾರತದ ಜನತೆಗೆ ಋಣಿಯಾಗಿದ್ದೇನೆ. ಇಂದಿನ ನನ್ನ ಮನ್ನಣೆಯು ಯುವ ಪೀಳಿಗೆಯನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮಹಾನ್ ರಾಷ್ಟ್ರದ ನಿರಂತರ ಅಭಿವೃದ್ಧಿಗೆ ಇದು ಅಗತ್ಯವಿದೆ. ಕೆಲವರ ಉದಾರತೆಯು ಶತಕೋಟಿ ಜನತೆಗೆ ಭರವಸೆ ನೀಡಬಹುದು ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದಿದ್ದಾರೆ.
ನಾರಾಯಣ ಮೂರ್ತಿಯವರಿಗೆ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಬಂದಿತ್ತು.
Advertisement