ತುರಿಕೆಯಿಂದ ತಪ್ಪಿಸಿಕೊಳ್ಳಲು ಕೃಷಿ ಭೂಮಿಯತ್ತ ಧಾವಿಸುತ್ತಿರುವ ಘೇಂಡಾಮೃಗಗಳು; ಬೆಳೆಗಳು ನಾಶ, ಸಂಕಷ್ಟದಲ್ಲಿ ರೈತರು!

ಅಲಿಪುರ್‌ದವಾರ್‌ನ ರೈತರು ವಿಲಕ್ಷಣವಾದ ಸಮಸ್ಯೆಯೊಂದನ್ನು ಎದುರಿಸುತ್ತಿದ್ದಾರೆ. ಅದೇನೆಂದರೆ, ಘೇಂಡಾಮೃಗಗಳು ಆಗಾಗ್ಗೆ ಜೋಳದ ಹೊಲಗಳ ಮೇಲೆ ದಾಳಿ ಮಾಡುತ್ತಿವೆ. ಈ ಪ್ರಾಣಿಗಳಿಗೆ ಈ ಧಾನ್ಯದ ಕುರಿತು ಆಸಕ್ತಿಯಿಲ್ಲ. ಆದರೆ, ತುರಿಕೆಯಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಎಲೆಗಳ ಒರಟಾದ ಅಂಚುಗಳಿಗೆ ತಮ್ಮ ಚರ್ಮವನ್ನು ಉಜ್ಜುತ್ತಿವೆ. ಈ ವೇಳೆ ಸಸ್ಯಗಳು ಹಾನಿಗೊಳಗಾಗುತ್ತಿವೆ.
ಘೇಂಡಾಮೃಗ
ಘೇಂಡಾಮೃಗ

ಕೋಲ್ಕತ್ತಾ: ಅಲಿಪುರ್‌ದವಾರ್‌ನ ರೈತರು ವಿಲಕ್ಷಣವಾದ ಸಮಸ್ಯೆಯೊಂದನ್ನು ಎದುರಿಸುತ್ತಿದ್ದಾರೆ. ಅದೇನೆಂದರೆ, ಘೇಂಡಾಮೃಗಗಳು ಆಗಾಗ್ಗೆ ಜೋಳದ ಹೊಲಗಳ ಮೇಲೆ ದಾಳಿ ಮಾಡುತ್ತಿವೆ. ಈ ಪ್ರಾಣಿಗಳಿಗೆ ಈ ಧಾನ್ಯದ ಕುರಿತು ಆಸಕ್ತಿಯಿಲ್ಲ. ಆದರೆ, ತುರಿಕೆಯಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಎಲೆಗಳ ಒರಟಾದ ಅಂಚುಗಳಿಗೆ ತಮ್ಮ ಚರ್ಮವನ್ನು ಉಜ್ಜುತ್ತಿವೆ. ಈ ವೇಳೆ ಸಸ್ಯಗಳು ಹಾನಿಗೊಳಗಾಗುತ್ತಿವೆ.

ಹದಿನೈದು ದಿನಗಳ ಹಿಂದೆ ಕೃಷಿಯೇ ಮುಖ್ಯ ಆದಾಯದ ಮೂಲವಾಗಿರುವ ಅಲಿಪುರ್‌ದವಾರ್ ಜಿಲ್ಲೆಯ ಚಿಲಪಾಟಾದಲ್ಲಿ ಈ ತೊಂದರೆ ಪ್ರಾರಂಭವಾಯಿತು. ಬೆಳಗಿನ ಜಾವದಲ್ಲಿ ಹಾನಿಗೊಳಗಾದ ಜೋಳದ ಗಿಡಗಳನ್ನು ನೋಡಿದ ರೈತರು ರಾತ್ರಿಯಿಡೀ ಕಾವಲು ಕಾಯಲು ನಿರ್ಧರಿಸಿದರು.

‘ಕಾವಲು ಕಾಯುವಾಗ ಘೇಂಡಾಮೃಗಗಳು ಹೊಲಗಳಿಗೆ ನುಗ್ಗುತ್ತಿರುವುದು ಕಂಡು ಬಂತು. ಆರಂಭದಲ್ಲಿ, ಪ್ರಾಣಿಗಳು ಜೋಳವನ್ನು ತಿನ್ನುತ್ತವೆ ಎಂದು ನಾವು ಭಾವಿಸಿದ್ದೆವು. ಆದರೆ, ಅವು ತಮ್ಮ ಚರ್ಮವನ್ನು ಜೋಳದ ಗಿಡಗಳಿಗೆ ಉಜ್ಜುವ ಮೂಲಕ, ಉತ್ಪನ್ನವನ್ನು ತಿನ್ನದೆ ಆ ಪ್ರದೇಶದಿಂದ ಹೊರನಡೆದಿರುವುದನ್ನು ಗಮನಿಸಿದಾಗ ನಮಗೆ ಆಶ್ಚರ್ಯವಾಯಿತು' ಎಂದು ಸಂತ್ರಸ್ತ ರೈತರಲ್ಲಿ ಒಬ್ಬರಾದ ಅಬು ಆಲಂ ಹೇಳಿದರು.

'ರೈತರು ಕಲ್ಲು ತೂರಾಟ ನಡೆಸಿ ಕೂಗಾಡುವ ಮೂಲಕ ಓಡಿಸಲು ಯತ್ನಿಸಿದರು. ಆದರೆ, ಅದು ಪರಿಣಾಮಕಾರಿಯಾಗಲಿಲ್ಲ. ದಾಳಿಗೆ ಹೆದರಿ, ನಾವು ಅವುಗಳ ಹತ್ತಿರ ಹೋಗಲು ಧೈರ್ಯ ಮಾಡಲಿಲ್ಲ ಮತ್ತು ಅವುಗಳನ್ನು ಓಡಿಸುವ ನಮ್ಮ ತಂತ್ರದಿಂದ ಘೇಂಡಾಮೃಗಗಳು ಕನಿಷ್ಠ ತೊಂದರೆಗೊಳಗಾಗಿದ್ದವು' ಎಂದು ಅವರು ಹೇಳಿದರು.

'ಆನೆಗಳನ್ನು ಹೊಲದಿಂದ ಓಡಿಸುವುದರಲ್ಲಿಯೇ ಜೀವನ ಕಳೆದಿದ್ದೇನೆ ಎನ್ನುತ್ತಾರೆ ಮತ್ತೊಬ್ಬ ರೈತ ತಾಹೇರ್ ಅಲಿ. ಆದರೆ, ಘೇಂಡಾಮೃಗಗಳಿಂದ ಇಂತಹ ಘಟನೆಯನ್ನು ನಾವು ಎಂದಿಗೂ ಕಂಡಿರಲಿಲ್ಲ. ಇದು ನಮ್ಮ ಉಳಿವಿನ ಪ್ರಶ್ನೆ. ಅರಣ್ಯ ಇಲಾಖೆಯು ತಕ್ಷಣ ಪರಿಹಾರವನ್ನು ಕಂಡುಕೊಳ್ಳಲು ನಾನು ವಿನಂತಿಸುತ್ತೇನೆ. ಇದರಿಂದ ನಾವು ಇನ್ನೂ ಹಾನಿಗೊಳಗಾಗದೆ ಉಳಿದಿರುವ ನಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು' ಎಂದು ಅವರು ಹೇಳಿದರು.

ಉತ್ತರ ವಿಭಾಗದ ಮುಖ್ಯ ಅರಣ್ಯ (ವನ್ಯಜೀವಿ) ಸಂರಕ್ಷಣಾಧಿಕಾರಿ ರಾಜೇಂದ್ರ ಜಾಖರ್ ಮಾತನಾಡಿ, ಕಲ್ಲು ತೂರಾಟದ ಮೂಲಕ ಘೇಂಡಾಮೃಗಗಳನ್ನು ಓಡಿಸುವುದು ತುಂಬಾ ಅಪಾಯಕಾರಿ. ಕಲ್ಲಿನಿಂದ ಹೊಡೆಸಿಕೊಂಡ ಪ್ರಾಣಿಗಳು ರೈತರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರೆ, ಅದು ಮಾರಣಾಂತಿಕವಾಗಬಹುದು. ಪರಿಣಾಮಗಳ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲು ನಾವು ಪ್ರಯತ್ನಿಸಿದ್ದೇವೆ. ಆದರೆ, ನಮ್ಮ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ ಎಂದರು. 

'ಆನೆಗಳು ಮತ್ತು ಘೇಂಡಾಮೃಗಗಳು ತಮ್ಮ ಚರ್ಮವನ್ನು ದೊಡ್ಡ ಮರಗಳ ಕಾಂಡಗಳಿಗೆ ಉಜ್ಜಿಕೊಂಡು ಪರಿಹಾರ ಪಡೆಯುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಜೋಳದ ಗದ್ದೆಗಳಲ್ಲೂ ಘೇಂಡಾಮೃಗಗಳು ಇದೇ ಪದ್ಧತಿ ಅನುಸರಿಸುತ್ತಿವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com