ಮಹಾ ಭೂಷಣ್ ಪ್ರಶಸ್ತಿ ಸಮಾರಂಭ: ಬಿಸಿಲಿನ ಝಳಕ್ಕೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆ, ಇನ್ನೂ 7 ಜನ ಆಸ್ಪತ್ರೆಯಲ್ಲಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ನವಿ ಮುಂಬೈನಲ್ಲಿ ಭಾನುವಾರ ನಡೆದ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 14ಕ್ಕೆ ಏರಿಕೆಯಾಗಿದೆ...
'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭ
'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭ

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ನವಿ ಮುಂಬೈನಲ್ಲಿ ಭಾನುವಾರ ನಡೆದ 'ಮಹಾರಾಷ್ಟ್ರ ಭೂಷಣ' ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲಿನ ತಾಪದಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 14ಕ್ಕೆ ಏರಿಕೆಯಾಗಿದೆ ಮತ್ತು ಇನ್ನೂ ಏಳು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಭಾನುವಾರ ಬಿಸಿಲಿನ ತಾಪದಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

"ಮೃತ ಮಹಿಳೆಯನ್ನು ವಿರಾರ್‌ ನಿವಾಸಿ 34 ವರ್ಷದ ಮಹಿಳೆ ಸ್ವಾತಿ ವೈದ್ಯ ಎಂದು ಗುರುತಿಸಲಾಗಿದ್ದು, ವಾಶಿಯ ಎಂಜಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಬಿಸಿಲಿನ ತಾಪದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ" ಎಂದು ಪನ್ವೇಲ್ ಮುನ್ಸಿಪಲ್ ಕಾರ್ಪೊರೇಶನ್‌ನ ಡೆಪ್ಯುಟಿ ಕಮಿಷನರ್ ವಿಠ್ಠಲ್ ಡಾಕೆ ಅವರು ತಿಳಿಸಿದ್ದಾರೆ.

"ಈಗ, ನವಿ ಮುಂಬೈನ ವಿವಿಧ ಆಸ್ಪತ್ರೆಗಳಲ್ಲಿ ಕೇವಲ ಏಳು ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಈ ಏಳು ಮಂದಿ ಅಪಾಯದಿಂದ ಪಾರಾಗಿದ್ದಾರೆ" ಎಂದು ಡಾಕೆ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ನಾರಾಯಣ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾದ ಈ ಮೆಗಾ ಕಾರ್ಯಕ್ರಮದಲ್ಲಿ ಭಾನುವಾರ 120ಕ್ಕೂ ಹೆಚ್ಚು ಜನ ಬಿಸಿಲಿನ ಝಳದಿಂದ ಡಿಹೈಡ್ರೇಶನ್ ಹಾಗೂ ಶಾಖ-ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರಲ್ಲಿ 15ಕ್ಕೂ ಹೆಚ್ಚು ಜನರನ್ನು ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com