ನವದೆಹಲಿ: ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಿ, ಭಿನ್ನಲಿಂಗಿಯರಂತೆ ಗೌರವಯುತ ಜೀವನ ನಡೆಸುವುದಕ್ಕೆ ಅವರಿಗೆ ಸಹಾಯ ಮಾಡಿ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ಸಂಪೂರ್ಣ ಅಧಿಕಾರವನ್ನು ಬಳಸಿಕೊಂಡು ಎಲ್ ಜಿಬಿಟಿ ಕ್ಲ್ಯುಐಎ ವ್ಯಕ್ತಿಗಳಿಗೆ ಗೌರವಯುತ ಜೀವನ ನಡೆಸುವುದಕ್ಕೆ ಅವಕಾಶ ನೀಡಬೇಕೆಂದು ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಲು ಮನವಿ ಮಾಡಿರುವ ಅರ್ಜಿದಾರರು ಕೇಳಿದ್ದಾರೆ. ಸರ್ಕಾರ ಮುಂದೆ ಬಂದು ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಬೇಕೆಂದು ಅರ್ಜಿದಾರರ ಪೈಕಿ ಒಬ್ಬರ ಪರವಾಗಿ ಹಾಜರಾಗಿದ್ದ ಹಿರೊಯ ಅಡ್ವೊಕೇಟ್ ಮುಕುಲ್ ರೋಹಟ್ಗಿ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿದ್ದ ಪಂಚ ಸದಸ್ಯ ಪೀಠಕ್ಕೆ ಹೇಳಿದ್ದಾರೆ.
ಈ ವಾದದ ವೇಳೆ ವಿಧವೆಯ ಮರು-ವಿವಾಹದ ಕಾನೂನನ್ನು ಉಲ್ಲೇಖಿಸಿದ ಮುಕುಲ್ ರೋಹಟ್ಗಿ, ಆ ಕಾನೂನನ್ನು ಸಮಾಜವು ಅಂದು ಒಪ್ಪಿಕೊಂಡಿತು ಮತ್ತು "ಕಾನೂನು ನಿಷ್ಠೆಯಿಂದ ವರ್ತಿಸಿತು" ಆ ನಂತರ ಸಮಾಜ ಅದನ್ನು ಸ್ವೀಕರಿಸಿ, ಅನುಸರಿಸಿತು ಎಂದು ಹೇಳಿದರು.
ಇಲ್ಲಿ ಕೋರ್ಟ್ ಸಹ ಸಮಾಜವನ್ನು ಸಲಿಂಗಿಗಳ ವಿವಾಹವನ್ನು ಒಪ್ಪಿಕೊಳ್ಳುವುದಕ್ಕೆ ಮುಂದಡಿ ಇಡುವಂತೆ ಮಾಡಬೇಕು. ಇದಕ್ಕೆ ಕೋರ್ಟ್ ಗೆ ಆರ್ಟಿಕಲ್ 142 ರ ಅಡಿಯಲ್ಲಿ (ಸಂಪೂರ್ಣ ನ್ಯಾಯವನ್ನು ಮಾಡಲು ಅಗತ್ಯವಾದ ಯಾವುದೇ ಆದೇಶವನ್ನು ರವಾನಿಸಲು ಸುಪ್ರೀಂ ಕೋರ್ಟ್ ಗೆ ಸಂಪೂರ್ಣ ಅಧಿಕಾರವನ್ನು ಒದಗಿಸುವ ಸಂವಿಧಾನದ ಅಂಶ) ಅವಕಾಶವಿದ್ದು, ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗುತ್ತದೆ.
ನಾವು ನಮ್ಮ ಹಕ್ಕನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನ್ಯಾಯಾಲಯದ ಪ್ರತಿಷ್ಠೆ ಮತ್ತು ನೈತಿಕ ಅಧಿಕಾರವನ್ನು ಅವಲಂಬಿಸಿದ್ದೇವೆ ಎಂದು ರೋಹಟ್ಗಿ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಎಸ್ ಆರ್ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
Advertisement