ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುವ ಕಟ್ಟಡ ಕಾರ್ಮಿಕರಿಗೆ ಮನೆ ಮತ್ತು ಹಾಸ್ಟೆಲ್ಗಳ ವ್ಯವಸ್ಥೆ ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದಲ್ಲಿ 13 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ, ಗ್ರೂಪ್ ಜೀವ ವಿಮೆ, ಅವರ ಮಕ್ಕಳಿಗೆ ಉಚಿತ ತರಬೇತಿ ಮತ್ತು ಟ್ರಾನ್ಸಿಟ್ ಹಾಸ್ಟೆಲ್ಗಳ ಸೌಲಭ್ಯ ಕಲ್ಪಿಸುವಂತೆ ದೆಹಲಿ ಸಿಎಂ ಆದೇಶಿಸಿದ್ದಾರೆ.
ಈ ಯೋಜನೆಗಳ ಅನುಷ್ಠಾನದ ವೆಚ್ಚವನ್ನು ಶೀಘ್ರವಾಗಿ ನಿರ್ಧರಿಸಲು ದೆಹಲಿ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಗ್ರೂಪ್ ಜೀವ ವಿಮಾ ಕಂಪನಿಗಳನ್ನು ಭೇಟಿ ಮಾಡುವಂತೆ ಕೇಜ್ರಿವಾಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ವಿಸ್ತರಿಸಲು ಕ್ರಿಯಾ ಯೋಜನೆಯನ್ನು ರೂಪಿಸುವಂತೆ ದೆಹಲಿ ಸಿಎಂ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ಗಳು, ಕಾರ್ಪೆಂಟರ್ಗಳು ಮತ್ತು ಪೇಂಟರ್ಗಳಿಗೆ ಟೂಲ್ಕಿಟ್ಗಳು ಹಾಗೂ ಕೌಶಲ್ಯ ತರಬೇತಿಯನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುವುದು ಎಂದು ದೆಹಲಿ ಸರ್ಕಾರ ಘೋಷಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ತರಬೇತಿ ಮತ್ತು ನಿರ್ಮಾಣ ಸ್ಥಳಗಳಲ್ಲಿ ಶಿಶುವಿಹಾರದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
Advertisement