ಡೇಟಾ ಸಂರಕ್ಷಣಾ ಮಸೂದೆಯಿಂದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ: ಭಾರತೀಯ ಸಂಪಾದಕರ ಕೂಟ
ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ ಹಾಗೂ ನಿಯತಕಾಲಿಕಗಳ ಮುದ್ರಣ ಹಾಗೂ ನೋಂದಣಿ ಮಸೂದೆಯು ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಭಾರತೀಯ ಸಂಪಾದಕರ ಕೂಟ ಭಾನುವಾರ ಆತಂಕ ವ್ಯಕ್ತಪಡಿಸಿದೆ.
ಪತ್ರಕರ್ತರು ಮತ್ತು ಅವರ ಮೂಲಗಳನ್ನು ಒಳಗೊಂಡಂತೆ ನಾಗರಿಕರ ಕಣ್ಗಾವಲುಗಾಗಿ ಡಿಪಿಡಿಪಿ ಮಸೂದೆಯು ಶಕ್ತಗೊಳಿಸುವ ಚೌಕಟ್ಟನ್ನು ರಚಿಸುತ್ತದೆ ಎಂದು ಸಂಪಾದಕರ ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಎರಡೂ ಮಸೂದೆಗಳು ಮಾಧ್ಯಮ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸುತ್ತವೆ. ಸಂಸ್ಥೆಗಳ ಮೇಲೆ ಸೆನ್ಸಾರ್ಶಿಪ್ನ ಹಿಡಿತ ಹಾಗೂ ಅನಿಯಂತ್ರಿತ ತಪಾಸಣೆಗೆ ಒತ್ತು ನೀಡುತ್ತವೆ. ಹಾಗಾಗಿ, ಕೂಡಲೇ ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭಾ ಸಭಾಪತಿ ಅವರು, ಈ ಮಸೂದೆಗಳನ್ನು ಸಂಸದೀಯ ಸಮಿತಿಯ ಮರುಪರಿಶೀಲನೆಗಾಗಿ ವಾಪಸ್ ಕಳುಹಿಸಬೇಕು ಎಂದು ಕೂಟವು ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, ಐಟಿ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ನಾಯಕರಿಗೆ ಮಸೂದೆಯ ಬಗ್ಗೆ ತನ್ನ ಕಳವಳದ ಬಗ್ಗೆಯೂ ಅದು ಬರೆದಿದೆ.
ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಸಂಸತ್ನ ಕೆಳಮನೆಯಲ್ಲಿ ಸೋಮವಾರ ಮಂಡಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ