ಮಣಿಪುರ ಹಿಂಸಾಚಾರ: NDA ಮೈತ್ರಿಕೂಟ ತೊರೆದ KPA, ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂದಕ್ಕೆ
ನವದೆಹಲಿ: ಮಣಿಪುರ ಹಿಂಸಾಚಾರದ ಬೆಳವಣಿಗೆ ಹಿನ್ನಲೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಎನ್ ಡಿಎ ಪಾಲುದಾರ ಪಕ್ಷ ಕುಕಿ ಪೀಪಲ್ಸ್ ಅಲೈಯನ್ಸ್ (ಕೆಪಿಎ) ಭಾನುವಾರ ಮಣಿಪುರದಲ್ಲಿ ಎನ್ ಬಿರೇನ್ ಸಿಂಗ್ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.
ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಜನಾಂಗೀಯ ಗಲಭೆಗಳು ನಡೆಯುತ್ತಿದ್ದು, 160 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದೇ ವಿಚಾರವಾಗಿ ಹಾಲಿ ಬೀರೇನ್ ಸಿಂಗ್ ಸರ್ಕಾರದೊಂದಿಗೆ ಅಸಮಾಧಾನ ಹೊಂದಿದ್ದ ಕುಕಿ ಪೀಪಲ್ಸ್ ಅಲೈಯನ್ಸ್ ಇದೀಗ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದು, ಮಾತ್ರವಲ್ಲದೇ ಹಾಲಿ ಬೀರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನೂ ಹಿಂಪಡೆದುಕೊಂಡಿದೆ.
ಈ ಕುರಿತಂತೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರಿಗೆ ಕೆಪಿಎ ಪತ್ರ ಬರೆದಿದ್ದು, ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವ ಪಕ್ಷದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೆಪಿಎ ಅಧ್ಯಕ್ಷ ಟಾಂಗ್ಮಾಂಗ್ ಹಾಕಿಪ್ ಅವರು, 'ಮಣಿಪುರದಲ್ಲಿ ಪ್ರಸ್ತುತ ಘರ್ಷಣೆಯನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ಮಣಿಪುರದ ಪ್ರಸ್ತುತ ಸರ್ಕಾರಕ್ಕೆ ನಿರಂತರ ಬೆಂಬಲವು ಫಲಪ್ರದವಾಗಿಲ್ಲ. ಅದರ ಪ್ರಕಾರ, ಮಣಿಪುರ ಸರ್ಕಾರಕ್ಕೆ ಕೆಪಿಎ ಬೆಂಬಲವನ್ನು ಈ ಮೂಲಕ ಹಿಂತೆಗೆದುಕೊಳ್ಳಲಾಗಿದೆ ಮತ್ತು ಅದನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
60 ಸದಸ್ಯರ ಮಣಿಪುರ ಸದನದಲ್ಲಿ, KPA ಇಬ್ಬರು ಶಾಸಕರನ್ನು ಹೊಂದಿದ್ದು, ಸೈಕುಲ್ನಿಂದ ಕಿಮ್ನಿಯೊ ಹಾಕಿಪ್ ಹ್ಯಾಂಗ್ಶಿಂಗ್ ಮತ್ತು ಸಿಂಘಾಟ್ನಿಂದ ಚಿನ್ಲುಂಥಾಂಗ್ ಶಾಸಕರಾಗಿದ್ದಾರೆ. ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 32 ಸದಸ್ಯರನ್ನು ಹೊಂದಿದ್ದರೆ, ಬೀರೇನ್ ಸಿಂಗ್ ಸರ್ಕಾರ ಐದು ನಾಗಾ ಪೀಪಲ್ಸ್ ಫ್ರಂಟ್ ಶಾಸಕರು ಮತ್ತು ಮೂವರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದೆ. ವಿರೋಧ ಪಕ್ಷದ ಶಾಸಕರಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಏಳು, ಕಾಂಗ್ರೆಸ್ನ ಐದು ಮತ್ತು ಜನತಾ ದಳ-ಯುನೈಟೆಡ್ನ ಆರು ಮಂದಿ ಸೇರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ