ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಬ್ರಿಜ್‌ಭೂಷಣ್ ಸಿಂಗ್

ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ ಎಂದು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌ ಹೇಳಿದ್ದಾರೆ.
ಬ್ರಿಜ್‌ಭೂಷಣ್ ಸಿಂಗ್
ಬ್ರಿಜ್‌ಭೂಷಣ್ ಸಿಂಗ್
Updated on

ನವದೆಹಲಿ: ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ ಎಂದು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌ ಹೇಳಿದ್ದಾರೆ.

ಬುಧವಾರ ದೆಹಲಿ ಕೋರ್ಟ್‌ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌, ‘ಲೈಂಗಿಕ ಉದ್ದೇಶವಿಲ್ಲದೇ ಮಹಿಳೆಯನ್ನು ಮುಟ್ಟುವುದು ಅಥವಾ ತಬ್ಬಿಕೊಳ್ಳುವುದು ಅಪರಾಧವಲ್ಲ ಎಂದು ಹೇಳಿದರು. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜಿತ್ ಸಿಂಗ್ ಜಸ್ಪಾಲ್ ಅವರು ತಮ್ಮ ವಿರುದ್ಧ ಆರೋಪಗಳನ್ನು ಹೊರಿಸುವ ಮುನ್ನವೇ ಅದನ್ನು ವಿರೋಧಿಸಿ ತಮ್ಮ ವಕೀಲರ ಮೂಲಕ ಬ್ರಿಜ್ ಭೂಷಣ್ ಅವರು ವಾದ ಮಂಡಿಸಿದ್ದಾರೆ. 

ಬ್ರಿಜ್ ಭೂಷಣ್ ಹಾಗೂ ಕುಸ್ತಿ ಫೆಡರೇಷನ್‌ನಿಂದ ಅಮಾನತುಗೊಂಡಿರುವ ಪ್ರಧಾನ ಕಾರ್ಯದರ್ಶಿ ವಿನೋದ್ ತೋಮರ್ ಅವರ ವಿರುದ್ಧ ಆರೋಪಗಳನ್ನು ಹೊರಿಸಬೇಕೇ ಎನ್ನುವ ಕುರಿತು ದೆಹಲಿ ಕೋರ್ಟ್ ಬುಧವಾರದಿಂದ ವಾದಗಳನ್ನು ಆಲಿಸಲು ಪ್ರಾರಂಭಿಸಿದೆ. ಈ ವೇಳೆ ಬ್ರಿಜ್ ಭೂಷಣ್ ಪರ ವಾದ ಮಂಡಿಸಿದ ವಕೀಲ ರಾಜೀವ್ ಮೋಹನ್ ಅವರು, ‘ಭಾರತದ ಹೊರಗೆ ಅಪರಾಧಗಳು ನಡೆದಿವೆ ಎಂದು ಆರೋಪಿಸಲಾಗಿರುವುದರಿಂದ ನ್ಯಾಯಾಲಯಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ಯಾವುದೇ ಅಧಿಕಾರವಿಲ್ಲ. ಭಾರತದ ವ್ಯಾಪ್ತಿಯಲ್ಲಿ ಈ ಆರೋಪಗಳನ್ನು ಪರಿಗಣಿಸಿದರೆ ಅದರಲ್ಲಿ ಮೂರು ಆರೋಪಗಳನ್ನು ಸುಳ್ಳು ಎನ್ನಬಹುದು. ಭಾರತದಲ್ಲಿ ನಡೆದ ಅಪರಾಧದ ಆರೋಪಗಳನ್ನು ಪರಿಗಣಿಸಿದರೆ ಅಶೋಕ ರಸ್ತೆ ಮತ್ತು ಸಿರಿ ಕೋಟೆಯಲ್ಲಿ ಮಹಿಳೆಯನ್ನು ತಬ್ಬಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಸ್ಪರ್ಶಿಸುವುದು ಮತ್ತು ತಬ್ಬಿಕೊಳ್ಳುವುದು ಅಪರಾಧವಾಗದು’ ಎಂದು ಪ್ರತಿಪಾದಿಸಿದರು.

‘ಕುಸ್ತಿಯಂಥ ಕ್ರೀಡೆಗಳಲ್ಲಿ ಹೆಚ್ಚಾಗಿ ತರಬೇತುದಾರರು (ಕೋಚ್‌) ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್‌ಗಳು ಅಪರೂಪ. ಕುಸ್ತಿಯಲ್ಲಿ ಸಾಧನೆಯ ಬಳಿಕ ಆಟಗಾರನನ್ನು ಸಂತೋಷದಿಂದ ತಬ್ಬಿಕೊಂಡರೆ ಅದು ಅಪರಾಧ ಎಂದು ಹೇಳಲಾಗದು. ಬ್ರಿಜ್ ಭೂಷಣ್ ವಿಚಾರದಲ್ಲೂ ನಡೆದ ಘಟನೆಯೂ ಅಂಥದ್ದೇ ಅಗಿದೆ. ಪುರುಷ ಕೋಚ್ ಆಟಗಾರರನ್ನು ತಬ್ಬಿಕೊಂಡರೆ ಅದು ಅಪರಾಧವಲ್ಲ’ ಎಂದೂ ಬ್ರಿಜ್ ಭೂಷಣ್ ಪರ ವಕೀಲರು ವಾದ ಮಂಡಿಸಿದರು. 

ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಗುರುವಾರವೂ ಮುಂದುವರಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು. 

ಈ ಹಿಂದೆ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯಬಾರದು ಮತ್ತು ಸಾಕ್ಷಿಗಳಿಗೆ ಯಾವುದೇ ಪ್ರಚೋದನೆ ನೀಡಬಾರದು ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 20 ರಂದು ಬ್ರಿಜ್ ಭೂಷಣ್ ಸಿಂಗ್ ಮತ್ತು ತೋಮರ್‌ಗೆ ತಲಾ 25,000 ರೂ.ಗಳ ಬಾಂಡ್‌ನಲ್ಲಿ ಜಾಮೀನು ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com