ನವದೆಹಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ವಿಡಿಯೋ ಬಿಡುಗಡೆಯಾದ ಸಮಯವನ್ನು ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.
ಮಣಿಪುರ ವಿಚಾರವಾಗಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತ ಚರ್ಚೆ ವೇಳೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಜುಲೈ 19 ರಂದು ಮೇ 4 ರ ಘಟನೆಯ ವೀಡಿಯೊ ಕಾಣಿಸಿಕೊಂಡಿತು ಮತ್ತು ರಾಷ್ಟ್ರವ್ಯಾಪಿ ಆಕ್ರೋಶವನ್ನು ಉಂಟುಮಾಡಿತ್ತು ಎಂಬ ಹೇಳಿಕೆಗೆ ಕಾಂಗ್ರೆಸ್ ತೀವ್ರ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, 'ಇಂತಹ ವಿಡಿಯೋ ಇರುವ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ 'ತಮ್ಮ ಅಸಮರ್ಥತೆಯನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಮಣಿಪುರದಿಂದ ಭೀಕರ ವೀಡಿಯೊ ಬಿಡುಗಡೆಯ 'ಸಮಯ'ವನ್ನು ಗೃಹ ಸಚಿವರು ಪ್ರಶ್ನಿಸುತ್ತಿರುವುದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ವೀಡಿಯೊದ ಅಸ್ತಿತ್ವದ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ತಿಳಿದಿಲ್ಲ ಎಂದು ಸಂಸತ್ತಿನಲ್ಲೇ ಪ್ರತಿಪಾದಿಸುವ ಮೂಲಕ, ಅವರು ಭಾರತದ ಗೃಹ ಸಚಿವರಾಗಿ ತಮ್ಮ ಸ್ವಂತ ಅಸಮರ್ಥತೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಮಣಿಪುರದ ಮುಖ್ಯಮಂತ್ರಿಯ ಸಂಪೂರ್ಣ ಅನರ್ಹತೆಯನ್ನು ಅಜಾಗರೂಕತೆಯಿಂದ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರದಲ್ಲಿ ನಡೆದಿರುವ ಘಟನೆಗಳು ನಾಚಿಕೆಗೇಡಿನ ಸಂಗತಿಯಾದರೂ ಅವುಗಳ ಮೇಲೆ ರಾಜಕೀಯ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಲೋಕಸಭೆಯಲ್ಲಿ ಶಾ ಹೇಳಿದ್ದರು. ಚಿತ್ರೀಕರಿಸಿದ ಕೆಲವು ದಿನಗಳ ನಂತರ ವೀಡಿಯೊ ಹೊರಬಂದಿದೆ ಎಂದು ಹೇಳಿದ ಅವರು, ಜನರಿಗೆ ಇದರ ಬಗ್ಗೆ ತಿಳಿದಿದ್ದರೆ, ಅದರ ಬಗ್ಗೆ ಆರಂಭಿಕ ಕ್ರಮಕ್ಕಾಗಿ ಅವರು ಅದನ್ನು ಪೊಲೀಸರು ಮತ್ತು ಅಧಿಕಾರಿಗಳಿಗೆ ಹಸ್ತಾಂತರಿಸಬೇಕಾಗಿತ್ತು ಎಂದು ಹೇಳಿದರು.
Advertisement