'ಮಣಿಪುರ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ; ನೀವು ದೇಶಭಕ್ತನಲ್ಲ, ದೇಶದ್ರೋಹಿ': ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

'ಕಳೆದ ಬಾರಿ ನಾನು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ್ದಾಗ ನನ್ನ ಮಾತುಗಳನ್ನು ಅದಾನಿ ಮೇಲೆ ಕೇಂದ್ರೀಕರಿಸಿದ್ದೆ. ಇದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿರಬಹುದು. ಆ ನೋವು ನಿಮ್ಮ ಮೇಲೆ ಕೂಡ ಪರಿಣಾಮ ಬೀರಿರಬಹುದು ಎಂದು ನಾನು ಭಾವಿಸುತ್ತೇನೆ.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು

ನವದೆಹಲಿ: 'ಕಳೆದ ಬಾರಿ ನಾನು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ್ದಾಗ ನನ್ನ ಮಾತುಗಳನ್ನು ಅದಾನಿ ಮೇಲೆ ಕೇಂದ್ರೀಕರಿಸಿದ್ದೆ. ಇದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿರಬಹುದು. ಆ ನೋವು ನಿಮ್ಮ ಮೇಲೆ ಕೂಡ ಪರಿಣಾಮ ಬೀರಿರಬಹುದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನಿಮ್ಮ ಬಳಿ ಇಂದು ಕ್ಷಮೆ ಕೋರುತ್ತೇನೆ. ಆದರೆ ಅಂದು ನಾನು ಆಡಿರುವ ಮಾತು ಸತ್ಯ. ಇವತ್ತು ಬಿಜೆಪಿಯಲ್ಲಿರುವ ನನ್ನ ಸ್ನೇಹಿತರು ಭಯಪಡಬೇಕಾಗಿಲ್ಲ, ಏಕೆಂದರೆ ನನ್ನ ಇಂದಿನ ಭಾಷಣ ಅದಾನಿ ಮೇಲೆ ಕೇಂದ್ರೀಕರಿಸಿಲ್ಲ' ಹೀಗೆ ಹೇಳುತ್ತಲೇ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾದ ಮಾತುಗಳೊಂದಿಗೆ ಲೋಕಸಭೆಯಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು ರಾಹುಲ್ ಗಾಂಧಿ.

ಮೋದಿ ಉಪನಾಮ ಕುರಿತು 2019ರಲ್ಲಿ ಕರ್ನಾಟಕದಲ್ಲಿ ಭಾಷಣವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅದಕ್ಕೆ ಸಂಬಂಧಪಟ್ಟಂತೆ ಗುಜರಾತ್ ನಲ್ಲಿ ಕೋರ್ಟ್ ರಾಹುಲ್ ಗಾಂಧಿ ವಿರುದ್ಧ ತೀರ್ಪು ನೀಡಿದಾಗ ಅವರನ್ನು ಸ್ಪೀಕರ್ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ್ದರು. ಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅದು ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಶಿಕ್ಷೆಗೆ ತಡೆ ತಂದಿದ್ದರಿಂದ ಲೋಕಸಭೆ ಸದಸ್ಯರ ಅನರ್ಹತೆಯನ್ನು ಸ್ಪೀಕರ್ ವಾಪಸ್ ತೆಗೆದುಕೊಂಡು ಇದೀಗ ಸದನಕ್ಕೆ ಮತ್ತೆ ರಾಹುಲ್ ಗಾಂಧಿ ಮರಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಇತ್ತೀಚೆಗೆ ರಚನೆಯಾದ INDIA ಮೈತ್ರಿಕೂಟ ಅವಿಶ್ವಾಸ ನಿರ್ಣಯ ಮಂಡಿಸಿ ಅದರ ಮೇಲೆ ನಿನ್ನೆ ಮತ್ತು ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ, ಮೊದಲಿಗೆ ನನ್ನನ್ನು ಮತ್ತೆ ಸಂಸತ್ ಸದಸ್ಯ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಾತು ಆರಂಭಿಸಿದರು.

ಸರ್ಕಾರದ ಮೇಲೆ ವಾಗ್ದಾಳಿ ನಡೆಸಿಕೊಂಡು ಮಾತು ಆರಂಭಿಸುವ ಬದಲು ಮಣಿಪುರ ಹಿಂಸಾಚಾರದ ವಿಷಯವನ್ನು ಬಿಂಬಿಸುವ ಬದಲು, ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರಾ ಎಂಬ ದೇಶಾದ್ಯಂತದ ಮೆರವಣಿಗೆ ಬಗ್ಗೆ ಮಾತನಾಡಿದರು.

ಭಾರತ್ ಜೋಡೋ ಯಾತ್ರೆ: ಕಳೆದ 10 ವರ್ಷಗಳಿಂದ ಪ್ರತಿದಿನ ನನ್ನ ಮೇಲೆ ಏಕೆ ನಿಂದನೆ ಮಾಡುತ್ತಿದ್ದರು ಎಂದು ನಾನು ಅರ್ಥಮಾಡಿಕೊಳ್ಳಬೇಕಾಗಿತ್ತು. "ನಾನು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗ, ಅದನ್ನು ಏಕೆ ಮಾಡುತ್ತಿದ್ದೇನೆ ಎಂದು ತಿಳಿದಿರಲಿಲ್ಲ, ಜನರು ನನ್ನನ್ನು ಕೇಳಿದರು - ನೀವು ಯಾಕೆ ಈ ಯಾತ್ರೆಗೆ ಹೋಗುತ್ತಿದ್ದೀರಿ, ಎಂದಾಗ ಅವರಿಗೆ ಏನು ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ದಿನಗಳೆದಂತೆ ಉದ್ದೇಶ ಅರ್ಥವಾಗುತ್ತಾ ಹೋಯಿತು. 

ಪ್ರತಿ ದಿನ ಹಲವಾರು ಕಿಲೋಮೀಟರ್ ಓಡುವ ಅಭ್ಯಾಸವಿದ್ದುದರಿಂದ ದಿನಕ್ಕೆ ಕೆಲವು ಹತ್ತಾರು ಕಿಲೋಮೀಟರ್ ನಡೆಯುವುದು ಸುಲಭ ಎಂಬ ಮನೋಭಾವದಿಂದ ಯಾತ್ರೆ ಆರಂಭಿಸಿದೆ ಎಂದರು.

ಭಾರತದ ಒಂದು ಒಳ್ಳೆಯ ವಿಷಯವೆಂದರೆ ಅದು ನಿಮ್ಮನ್ನು ನಿಮ್ಮ ಸ್ಥಾನದಲ್ಲಿ ಇರಿಸುತ್ತದೆ, ನಿಮ್ಮ ಮನಸ್ಸಿನಿಂದ ಹೆಮ್ಮೆ ಮತ್ತು ದುರಹಂಕಾರವನ್ನು ತೆಗೆದುಹಾಕುತ್ತದೆ ಎಂದರು. 

ಯಾತ್ರೆ ಆರಂಭಿಸಿದ ಎರಡು ದಿನಗಳ ನಂತರ ನನ್ನ ಮೊಣಕಾಲು ನೋವು ಪ್ರಾರಂಭವಾಯಿತು, ಬೆಳಗ್ಗೆ ಎದ್ದರೆ ಕಾಲು ನೋವು ಬರುತ್ತಿತ್ತು. ಆದರೆ ಅದೆಲ್ಲಿಂದ ಶಕ್ತಿ ಬರುತ್ತಿತ್ತೋ ಗೊತ್ತಿಲ್ಲ. ಬೆಳಗಿನ ಜಾವ ಸರಿದಂತೆ ಕಾಲು ನೋವು ಮಾಯವಾಗಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆ. 

ಒಂದು ದಿನ, ಒಬ್ಬ ಹುಡುಗಿ ಚೀಟಿ ಹಿಡಿದುಕೊಂಡು ನನ್ನ ಬಳಿಗೆ ಬಂದಳು, ಅದರಲ್ಲಿ 'ರಾಹುಲ್, ನಾನು ನಿಮ್ಮೊಂದಿಗೆ ನಡೆಯುತ್ತಿದ್ದೇನೆ' ಎಂದು ಬರೆದಿದ್ದಳು, ನೋಡಿದರೆ ಅವಳ ಕಾಲಿಗೆ ಗಾಯವಾಗಿತ್ತು. ಅಂತವರ ಮಾತುಗಳು ನನ್ನ ನೋವನ್ನು ಮರೆಸುತ್ತಿದ್ದವು.

ನಮ್ಮ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಪ್ರಯಾಣ ಪ್ರಾರಂಭಿಸಿದೆವು. ಆರಂಭ ದಿನಗಳಲ್ಲಿ ಸ್ಥಳಗಳಲ್ಲಿ ಸೇರಿ ಭಾಷಣ ಮಾಡುತ್ತಿದ್ದೆವು. ಯುವಕರು, ರೈತರು, ವಿದ್ಯಾರ್ಥಿಗಳು ಸೇರುತ್ತಿದ್ದರು. ದಿನಗಳೆದಂತೆ ಯಾತ್ರೆಯ ಉದ್ದೇಶ ಅರ್ಥವಾಗುತ್ತಾ ಹೋಯಿತು. 

ಒಂದು ದಿನ, ಒಬ್ಬ ರೈತ ಬಂದು ನನಗೆ ಒಂದು ಸಣ್ಣ ಹತ್ತಿ ಕಟ್ಟು ಕೊಟ್ಟು ಹೇಳಿದನು: ನನ್ನ ಬೆಳೆಯಲ್ಲಿ ಉಳಿದಿರುವುದು ಇಷ್ಟೇ ... ನಾನು ಅವನ ಹೃದಯದ ದುಃಖವನ್ನು ನನ್ನ ಹೃದಯದಲ್ಲಿ, ಅವನ ಕಣ್ಣುಗಳಲ್ಲಿ ಅವಮಾನವನ್ನು ನನ್ನಲ್ಲಿ ಅನುಭವಿಸಿದೆ. ಅವನ ಕಣ್ಣುಗಳಲ್ಲಿ ಹಸಿವು ಎದ್ದುಕಾಣುತ್ತಿತ್ತು. 

ಯಾತ್ರೆ ಆರಂಭಿಸಿದ ಕೆಲವೇ ದಿನಗಳಲ್ಲಿ ತೋಳನಾಗಿದ್ದವನು ಇರುವೆಯಾದೆ. ಸಾಕಷ್ಟು ವಿಷಯಗಳು ಕಣ್ಣು ತೆರೆಸಿತು ಎಂಬರ್ಥದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಅಹಂಕಾರದಿಂದ ಭಾರತವನ್ನು ನೋಡಲು ಹೊರಬಂದವನು, ಯಾತ್ರೆ ಮುಗಿಯುವ ಹೊತ್ತಿಗೆ ಅಹಂಕಾರ ಕಣ್ಮರೆಯಾಯಿತು ಎಂದರು.

ಮಣಿಪುರದಲ್ಲಿ ನೀವು ಭಾರತವನ್ನು ಕೊಂದಿದ್ದೀರಿ: ಕೆಲವು ದಿನಗಳ ಹಿಂದೆ, ನಾನು ಮಣಿಪುರಕ್ಕೆ ಹೋಗಿದ್ದೆ, ನಮ್ಮ ಪ್ರಧಾನಿ ಇಂದಿಗೂ ಹೋಗಿಲ್ಲ, ಏಕೆಂದರೆ ಅವರಿಗೆ ಮಣಿಪುರ ಭಾರತವಲ್ಲ, ನಾನು ಮಣಿಪುರ ಎಂಬ ಪದವನ್ನು ಬಳಸಿದ್ದೇನೆ ಆದರೆ ಮಣಿಪುರ ಇನ್ನು ಉಳಿಯುವುದಿಲ್ಲ ಎನ್ನುವುದು ಸತ್ಯ, ನೀವು ಮಣಿಪುರವನ್ನು ಎರಡು ಭಾಗ ಮಾಡಿದ್ದೀರಿ, ನೀವು ಮಣಿಪುರವನ್ನು ವಿಭಜಿಸಿ ಒಡೆದಿದ್ದೀರಿ, ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ ಎಂದು ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಟೀಕಿಸಿದರು. 

"ಅವರು ಮಣಿಪುರದಲ್ಲಿ ಭಾರತವನ್ನು ಕೊಂದರು. ಕೇವಲ ಮಣಿಪುರವಲ್ಲ ಭಾರತವನ್ನು ಕೊಂದರು. ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ, ಆದರೆ ಅದು ಮಣಿಪುರದಲ್ಲಿ ಭಾರತವನ್ನು ಕೊಂದಿದೆ ಎಂದರು.

ನೀವು ರಾಜಸ್ಥಾನಕ್ಕೆ ಯಾವಾಗ ಹೋಗುತ್ತೀರಿ ಎಂದು ಆಡಳಿತಾರೂಢ ಸಂಸದರು ಕೇಳುತ್ತಿದ್ದರು. ಇಂದು ಹೋಗುತ್ತಿದ್ದೇನೆ ಎಂದರು.

ನೀವು ದೇಶದ್ರೋಹಿ, ದೇಶಪ್ರೇಮಿಯಲ್ಲ: ಭಾರತ ಒಂದು ಧ್ವನಿ, ಭಾರತ ನಮ್ಮ ಜನರ ಧ್ವನಿ, ಇದು ಹೃದಯದ ಧ್ವನಿ. ಮಣಿಪುರದಲ್ಲಿ ನೀವು ಆ ಧ್ವನಿಯನ್ನು ಕೊಂದಿದ್ದೀರಿ. ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ ಎಂದರ್ಥ. ನೀವು ಮಣಿಪುರದ ಜನರನ್ನು ಕೊಂದು ಭಾರತವನ್ನು ಕೊಂದಿದ್ದೀರಿ. ನೀವು ದೇಶದ್ರೋಹಿ, ದೇಶಭಕ್ತನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com