ಪಾಟ್ನಾ: ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ್ದಕ್ಕಾಗಿ ಪಾಟ್ನಾ ಸಿವಿಲ್ ನ್ಯಾಯಾಲಯದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರತೀಕ್ ಶೈಲ್ ವಿರುದ್ಧ ದಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಚಾಂದಿನಿ ಚಂದಾ ಒಂದು ದಿನದ ಹಿಂದೆ ರಾಜಾ ಬಜಾರ್ ಪಾರಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಗಳನ್ನು ಪತಿ ಮತ್ತು ಆಕೆಯ ಅತ್ತೆ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೃತ ಮಹಿಳೆ ಚಾಂದಿನಿ ಚಂದಾ ಅವರು ಪಾಟ್ನಾ ಸಿಟಿ ಸಿವಿಲ್ ಕೋರ್ಟ್ನಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಪತ್ನಿಯಾಗಿದ್ದು, ಆಕೆಯ ಕುಟುಂಬ ಸದಸ್ಯರು ವರದಕ್ಷಿಣೆ ಸಾವು ಎಂದು ಆರೋಪಿಸಿದ್ದಾರೆ. ಹೀಗಾಗಿ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ದಾನಪುರ ಎಸ್ಎಚ್ಒ ತಿಳಿಸಿದ್ದಾರೆ.
'ಆಗಸ್ಟ್ 14ರಂದು ನನ್ನ ಮಗಳು ಅಸ್ವಸ್ಥಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ನಂತರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರದಿದ್ದಾಗ ನಾವು ಅವಳನ್ನು ಪ್ಯಾರಸ್ ಆಸ್ಪತ್ರೆಗೆ ದಾಖಲಿಸಿದ್ದೇವು. ಅಲ್ಲಿ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದಳು. ನನ್ನ ಮಗಳಿಗೆ ಆಕೆಯ ಅತ್ತೆಯಂದಿರು ವರದಕ್ಷಿಣೆ ತರುವಂತೆ ಆಗಾಗ್ಗೆ ಚಿತ್ರಹಿಂಸೆ ನೀಡುತ್ತಿದ್ದರು. ಆಕೆಯ ಸಾವಿಗೆ ಅವರೇ ಕಾರಣ ಎಂದು ಮೃತಳ ತಂದೆ ಅಶೋಕ್ ಕುಮಾರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
2022ರ ಮೇ 11ರಂದು ಚಾಂದಿನಿ ಅವರು ಪ್ರತೀಕ್ ಅವರನ್ನು ವಿವಾಹವಾಗಿದ್ದರು. ಮದುವೆ ವೇಳೆ ಚಾಂದಿನಿಯ ಪೋಷಕರು 22 ಲಕ್ಷ ರೂಪಾಯಿ ನಗದು ಮತ್ತು 18 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಕ್ರದ ವಾಹನವನ್ನು ವರದಕ್ಷಿಣೆಯಾಗಿ ನೀಡಿದ್ದಾರೆ ಎಂದು ಮಾಧ್ಯಮವೊಂದು ತಿಳಿಸಿದೆ.
Advertisement