ದೆಹಲಿಯಲ್ಲಿ ಮಣಿಪುರಿ ದಂಪತಿ ಮೇಲೆ ಗುಂಪು ಹಲ್ಲೆ
ನವದೆಹಲಿ: ಆಗ್ನೇಯ ದೆಹಲಿಯ ಸನ್ಲೈಟ್ ಕಾಲೋನಿಯಲ್ಲಿ ಮಣಿಪುರದ ವ್ಯಕ್ತಿ, ಅವರ ಪತ್ನಿ ಮತ್ತು ಅವರ ಸಹೋದರಿಯ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಬೆಳಗಿನ ಜಾವ 2.30ಕ್ಕೆ ಕಿಲೋಕರಿ ಗ್ರಾಮದಿಂದ ಘಟನೆಯ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ಸ್ಥಳಕ್ಕೆ ಆಗಮಿಸಿದಾಗ ವ್ಯಕ್ತಿಯೊಬ್ಬನನ್ನು ಥಳಿಸಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಶ್ರಮದ ಜೀವನ್ ನಗರ ನಿವಾಸಿಯಾದ ಸಂತ್ರಸ್ತ ಮಣಿಪುರಿ ವ್ಯಕ್ತಿಯ ಮೊಣಕಾಲು, ಕಣ್ಣು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಗುರುವಾರ ಮಧ್ಯಂತರ ರಾತ್ರಿ ಸಂತ್ರಸ್ತ ವ್ಯಕ್ತಿ ತಮ್ಮ ಪತ್ನಿ ಮತ್ತು ಅವರ ಸಹೋದರಿಯನ್ನು ಸ್ನೇಹಿತನ ಮನೆಗೆ ಬಿಡಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯಲ್ಲಿ ಕ್ಯಾಬ್ ಗಾಗಿ ಕಾಯುತ್ತಿರುವಾಗ, ವ್ಯಕ್ತಿಯೊಬ್ಬರು ಮಣಿಪುರದ ವ್ಯಕ್ತಿಯನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ಅವರ ಪತ್ನಿ ಹಾಗೂ ಅವರ ಸಹೋದರಿಯ ಮೇಲೆ ಹಲ್ಲೆ ನಡೆಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
"ನಂತರ ಆರೋಪಿಗಳು ಇನ್ನೂ ಕೆಲವು ಜನರನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದು, ಹಲವರು ಸೇರಿಕೊಂಡು ಮಣಿಪುರದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ