ಡಾರ್ಜಿಲಿಂಗ್: 'ಪ್ರಶ್ನೆಗಾಗಿ ಲಂಚ' ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿದ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದು, ಇದು ದೇಶದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ 'ದ್ರೋಹ' ಎಂದು ಕಿಡಿ ಕಾರಿದ್ದಾರೆ.
'ಪ್ರಶ್ನೆಗಾಗಿ ಲಂಚ' ಪ್ರಕರಣದಲ್ಲಿ ಮೊಹಿತ್ರಾ ಅವರನ್ನು ಸಂಸಂದ ಸ್ಥಾನದಿಂದ ಉಚ್ಚಾಟಿಸುವಂತೆ ಲೋಕಸಭೆ ನೈತಿಕ ಸಮಿತಿ ನೀಡಿದ್ದ ವರದಿಯನ್ನು ಇಂದು ಸದನದಲ್ಲಿ ಮಂಡಿಸಿ ಅಂಗೀಕರಿಸಲಾಗಿದೆ.
ಸದನವು ತನ್ನ ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿದ ನಂತರ ಮೊಯಿತ್ರಾ ಅವರನ್ನು ಉಚ್ಛಾಟಿಸಲಾಯಿತು.
"ಇದು ಸಂಸದೀಯ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿದ ರೀತಿಯನ್ನು ನಾವು ಖಂಡಿಸುತ್ತೇವೆ; ಪಕ್ಷ ಅವರೊಂದಗೆ ಬಲವಾಗಿ ನಿಂತಿದೆ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದ್ದಾರೆ.
ಅವರು (ಬಿಜೆಪಿ) ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಸೇಡಿನ ರಾಜಕಾರಣ ಮಾಡಿದ್ದಾರೆ. ಇದು ದುಃಖದ ದಿನ ಮತ್ತು ಭಾರತೀಯ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Advertisement