ಗಾಜಿಯಾಬಾದ್(ಉತ್ತರಪ್ರದೇಶ): ಗಾಜಿಯಾಬಾದ್ ಜಿಲ್ಲೆಯ ಮುರಾದ್ನಗರ ಪ್ರದೇಶದಲ್ಲಿ ಉದ್ಯಾನವನದ ನಿರ್ಮಾಣ ಹಂತದ ಗೇಟ್ ಕುಸಿದು ಆರು ವರ್ಷದ ಮಗು ಸಾವನ್ನಪ್ಪಿದ್ದು ಮತ್ತಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ ಮೂವರು ಮಕ್ಕಳು ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ಅದರ ಗೇಟ್ ಕುಸಿದು ಮೂವರು ಅದರ ಅಡಿ ಸಿಲುಕಿದ್ದು ಸುಭಾನ್ ಎಂಬ ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರಾದ್ನಗರದ ಸರ್ಕಾರಿ ಶಾಲೆಯ ಬಳಿ ಪಾರ್ಕ್ ಗೇಟ್ ನಿರ್ಮಿಸುತ್ತಿದ್ದ ಗುತ್ತಿಗೆದಾರ ಮನೋಜ್ ಕುಮಾರ್ ವಿರುದ್ಧ ಮುರಾದನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದು ಗ್ರಾಮಾಂತರ ಪ್ರದೇಶದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ. ಸ್ಥಳೀಯ ಪುರಸಭೆಯಿಂದ ಟೆಂಡರ್ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಕೆ.ಸಿಂಗ್ ತಿಳಿಸಿದ್ದಾರೆ. ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನಗರಸಭೆ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಆಡಳಿತದ ಪ್ರಕಾರ, ನಿರ್ಮಾಣ ಕಾಮಗಾರಿಯ ಸೂಕ್ತ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ಆರೋಪದ ಮೇಲೆ ಜೂನಿಯರ್ ಎಂಜಿನಿಯರ್ ಸತ್ಯೇಂದ್ರ ಕುಮಾರ್ ವಿರುದ್ಧ ಅಮಾನತು ಮತ್ತು ಇಲಾಖಾ ವಿಚಾರಣೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ.
ಮುರಾದನಗರ ಪುರಸಭೆ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ನಡೆಸಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Advertisement