ಅಗರ್ತಲಾ: ಉದ್ಯಮಿ ಗೌತಮ್ ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್(ಟಿಎಂಸಿ) ಬಿಜೆಪಿಯ 'ಡಬಲ್ ಇಂಜಿನ್' ಸರ್ಕಾರವನ್ನು ದೇಶದಿಂದ ಕಿತ್ತೊಗೆಯಲಿದೆ ಎಂದು ಮಂಗಳವಾರ ಹೇಳಿದ್ದಾರೆ.
"ಟಿಎಂಸಿ ಏನು ಹೇಳುತ್ತದೋ ಅದನ್ನು ಒಮ್ಮೆ ಪರೀಕ್ಷಿಸಿ. ಇದು ದೇಶದಿಂದ ಡಬಲ್ ಎಂಜಿನ್ ಸರ್ಕಾರವನ್ನು ಕಿತ್ತೊಗೆಯುತ್ತದೆ. ತ್ರಿಪುರಾ, ಮೇಘಾಲಯ ಮತ್ತು ಇತರ ರಾಜ್ಯಗಳು ಬಂಗಾಳದ ಪರವಾಗಿ ನಿಲ್ಲುತ್ತವೆ" ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಇದನ್ನು ಓದಿ: ತ್ರಿಪುರಾ: ಕಾಂಗ್ರೆಸ್ ಬಿಜೆಪಿಯ 'ಬಿ' ಟೀಂ ಎಂದ ಮಮತಾ!
ಟಿಎಂಸಿ ತ್ರಿಪುರಾದ 60 ಕ್ಷೇತ್ರಗಳಲ್ಲಿ 28ರಲ್ಲಿ ಸ್ಪರ್ಧಿಸುತ್ತಿದ್ದು, ಇಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಕಳೆದ 25 ವರ್ಷಗಳಿಂದ ಏಕಾಂಗಿಯಾಗಿ ಹೋರಾಡುತ್ತಿರುವ ಏಕೈಕ ಪಕ್ಷ ಟಿಎಂಸಿ ಎಂದು ಪ್ರತಿಪಾದಿಸಿದರು ಮತ್ತು ತಮ್ಮ ಪಕ್ಷದ ಸಸಿ ಈಗ "ದೊಡ್ಡ ಮರವಾಗಿ ಬೆಳೆದಿದೆ" ಎಂದು ಹೇಳಿದರು.
"ಅಭಿಷೇಕ್(ಬ್ಯಾನರ್ಜಿ) ಸಿಬಿಐ ಮತ್ತು ಇಡಿ ಎಂಬ ಎರಡು ಎಂಜಿನ್ಗಳ ಬಗ್ಗೆ ಮಾತನಾಡುತ್ತಿದ್ದರು. ನೀವು ಬಂಧಿಸುವ ಮೂಲಕ ಅಥವಾ ಸಿಬಿಐ ಮತ್ತು ಇಡಿ ಬಳಸಿ ನಮ್ಮನ್ನು ಹೆದರಿಸುವ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು ಎಂದು ನೀವು ಭಾವಿಸಿದರೆ ಅದು ತಪ್ಪು. 2024 ರವರೆಗೆ ಕಾದು ನೋಡಿ" ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement