ಶಬರಿಮಲೆ ಅಯ್ಯಪ್ಪ ಸ್ವಾಮಿ ಕುರಿತು ಸಿನೆಮಾ: ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಅಂಗಡಿ ಧ್ವಂಸ
ಮಲಪ್ಪುರಂ: ಶಬರಿಮಲೆ ಅಯ್ಯಪ್ಪ ದೇವರ ಬಗ್ಗೆ ಹೊಸತಾಗಿ ಬಿಡುಗಡೆಯಾದ ಚಲನಚಿತ್ರವನ್ನು ಹಾಡಿ ಹೊಗಳಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಪೋಸ್ಟ್ಗಳ ಬಗ್ಗೆ ಆಕ್ರೋಶಗೊಂಡ ಕೆಲ ಅಪರಿಚಿತ ವ್ಯಕ್ತಿಗಳು ಇಲ್ಲಿನ ಸಿಪಿಐ ಪದಾಧಿಕಾರಿಯೊಬ್ಬರ ಅಂಗಡಿಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸಿ ಪ್ರಗಿಲೇಶ್ ಎಂಬುವವರ ಬೆಳಕು ಮತ್ತು ಧ್ವನಿ ಸೇವೆಯ ಅಂಗಡಿಯನ್ನು ಜನವರಿ 1 ರ ರಾತ್ರಿ ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಅಂಗಡಿಯ ಬಳಿ ಇರಿಸಲಾಗಿದ್ದ ಹಲವಾರು ಹೊಸದಾಗಿ ತಯಾರಿಸಿದ ಬೋರ್ಡ್ಗಳು ಮತ್ತು ಅಲಂಕಾರಿಕ ದೀಪಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.
‘ಮಲಿಕಪ್ಪುರಂ’ ಚಿತ್ರವನ್ನು ಹೊಗಳಿರುವುದರಿಂದ ಅಂಗಡಿ ಮೇಲೆ ದಾಳಿ ನಡೆಸುವುದಾಗಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಸಿಪಿಐನ ಸ್ಥಳೀಯ ಮುಖಂಡ ಪ್ರಗಿಲೇಶ್ ಹೇಳಿಕೊಂಡಿದ್ದರು. ನಟ ಉನ್ನಿ ಮುಕುಂದನ್ ಮುಖ್ಯ ಪಾತ್ರದಲ್ಲಿ, ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಬಲವಾದ ಆಸೆಯನ್ನು ಹೊಂದಿರುವ ಪುಟ್ಟ ಹಳ್ಳಿಯ ಹುಡುಗಿಯ ಕಥೆಯನ್ನು ಚಿತ್ರ ವಿವರಿಸುತ್ತದೆ.
ಇತ್ತೀಚೆಗೆ ನಾನು ಚಲನಚಿತ್ರವನ್ನು ಹೊಗಳಿ ಕೆಲವು ಪೋಸ್ಟ್ಗಳನ್ನು ಹಾಕಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಚರ್ಚೆಗಳು ನಡೆದಿವೆ. ನಂತರ ನನ್ನ ಮೇಲೆ ಮತ್ತು ನನ್ನ ಅಂಗಡಿಯ ಮೇಲೆ ದಾಳಿ ಮಾಡುವುದಾಗಿ ಕೆಲವರು ಬೆದರಿಕೆ ಹಾಕಿದ್ದರು ಎಂದು ಪ್ರಗಿಲೇಶ್ ಹೇಳಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 427 ಮತ್ತು 435 ರ ಅಡಿಯಲ್ಲಿ ಆಸ್ತಿ ನಾಶಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಮಾಲೀಕರು ನೀಡಿರುವ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೆರುಂಬದಪ್ಪು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ