ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದೇವಸ್ಥಾನವೊಂದಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ಸುಮಾರು 70,000 ರೂಪಾಯಿ ನಗದು ಹೊಂದಿದ್ದ ಕಾಣಿಕೆ ಪೆಟ್ಟಿಗೆ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ದಾಪೋಲಿ ಗ್ರಾಮದ ರೇಣುಕಾ ಮಾತಾ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ದೇವಸ್ಥಾನದ ಬಾಗಿಲಿನ ಬೀಗ ಒಡೆದಿರುವುದು ಮತ್ತು ಹಣದ ಪೆಟ್ಟಿಗೆ ಹಾಗೂ ದೇವಿಯ ವಿಗ್ರಹದ ಬೆಳ್ಳಿ ಸರ ನಾಪತ್ತೆಯಾಗಿರುವುದು ಪತ್ತೆಯಾಗಿದೆ.
ಅರ್ಚಕರು ನೀಡಿರುವ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 380 (ಕಳ್ಳತನ) ಮತ್ತು 457 (ಅಪರಾಧ ಮಾಡುವ ಸಲುವಾಗಿ ರಾತ್ರಿಯಲ್ಲಿ ಮನೆ ಒಡೆಯುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಾಲ್ಘರ್ ಜಿಲ್ಲೆಯ ಗ್ರಾಮೀಣ ನಿಯಂತ್ರಣ ಕೊಠಡಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ.ಎಂ. ಪವಾರ್ ಹೇಳಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement