ನವದೆಹಲಿ: ಸಶಸ್ತ್ರ ಪಡೆಗಳ ಎಲ್ಲಾ ಅರ್ಹ ಪಿಂಚಣಿದಾರರಿಗೆ ಒಂದು ಶ್ರೇಣಿ-ಒಂದು ಪಿಂಚಣಿ(ಒಆರ್ಒಪಿ) ಯೋಜನೆಯ ಬಾಕಿ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಮಾರ್ಚ್ 15 ರವರೆಗೆ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠ, ಸಶಸ್ತ್ರ ಪಡೆಗಳ ಪಿಂಚಣಿದಾರರಿಗೆ ಎಲ್ಲಾ ಬಾಕಿ ಹಣವನ್ನು ತ್ವರಿತವಾಗಿ ಪಾವತಿಸಲು ಮತ್ತು ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಒಆರ್ಒಪಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಯಾವುದೇ ಕ್ರಮದಿಂದ ನೊಂದಿದ್ದರೆ ಸುಪ್ರೀಂಗೆ ಅರ್ಜಿ ಸಲ್ಲಿಸಲು ಮಾಜಿ ಸೈನಿಕರ ಸಂಘಕ್ಕೆ ಮುಕ್ತ ಸ್ವಾತಂತ್ರ್ಯ ನೀಡಿದೆ.
ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು, ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್(ಸಿಜಿಡಿಎ) ಟ್ಯಾಬ್ಯುಲೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದೀಗ ಅಂತಿಮ ಅನುಮೋದನೆಗಾಗಿ ರಕ್ಷಣಾ ಸಚಿವಾಲಯಕ್ಕೆ ಕೋಷ್ಟಕಗಳನ್ನು ಕಳುಹಿಸಲಾಗಿದೆ. ‘‘ಮಾರ್ಚ್ 15ರ ವೇಳೆಗೆ ಸಶಸ್ತ್ರ ಪಡೆಗಳ 25 ಲಕ್ಷ ಪಿಂಚಣಿದಾರರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು’’ ಎಂದು ಸುಪ್ರೀಂ ಕೋರ್ಟ್ ತಿಳಿಸಿದರು,
ಕಳೆದ ತಿಂಗಳು, ಸಶಸ್ತ್ರ ಪಡೆಗಳ ಎಲ್ಲಾ ಅರ್ಹ ಪಿಂಚಣಿದಾರರಿಗೆ ಒಆರ್ಒಪಿ ಯೋಜನೆಯ ಬಾಕಿ ಪಾವತಿಸಲು ಮಾರ್ಚ್ 15, 2023 ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
Advertisement