ನವದೆಹಲಿ: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಸೋಮವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಆಕರ್ಷಣೆಯ ಕೇಂದ್ರಬಿಂದುವಾದರು. ಅವರ ಪ್ರಜಾ ಸಂಗ್ರಾಮ ಯಾತ್ರೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅವರಿಂದ ಕಲಿಯುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದರು. ಹೋರಾಟಗಳೊಂದಿಗೆ ಅವರು ಯಾವ ರೀತಿ ಈ ಯಾತ್ರೆ ಪೂರ್ಣಗೊಳಿಸಿದ್ದಾರೆ ಎಂಬುದನ್ನು ಮೋದಿ ಶ್ಲಾಘಿಸಿದರು.
ರಾಷ್ಟ್ರೀಯ ಕಾರ್ಯಕಾರಣಿಯ ಮೊದಲ ದಿನ ಪ್ರಜಾ ಸಂಗ್ರಾಮ ಯಾತ್ರೆ ಬಗ್ಗೆ ಬಂಡಿ ಸಂಜಯ್ ಪ್ರಸ್ತುತಪಡಿಸಿದರು. ಒಂದು ತಾಸು ಇದೇ ವಿಚಾರವಾಗಿ ಮಾತನಾಡಿದ ಅವರು, ಅಡೆತಡೆಗಳ ನಡುವೆಯೂ ತಾವು ಈ ರೀತಿಯಲ್ಲಿ ಈ ಯಾತ್ರೆಯನ್ನು ಪೂರ್ಣಗೊಳಿಸಿದ್ದಾಗಿ ವಿವರಿಸಿದರು.
ಬಂಡಿ ಸಂಜಯ್ ಹಿಂದಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿದಾದರೂ ಅವರ ಮಾತೃ ಭಾಷೆ ತೆಲುಗಿನಲ್ಲಿ ವಿವರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ತಿಳಿಸಿದರು. ಭಾಷೆಗಳು ಯಾವುದೇ ಅಡ್ಡಿಯನ್ನುಂಟು ಮಾಡಲ್ಲ ಎಂದರು. ಆದಾಗ್ಯೂ, ತದನಂತರ ಬಂಡಿ ಸಂಜಯ್ ಅವರ ತೆಲುಗು ಭಾಷಣವನ್ನು ತರುಣ್ ಚುಗ್ ತರ್ಜುಮೆ ಮಾಡಿದರು.
ಈ ಯಾತ್ರೆಯನ್ನು ಐದು ಹಂತಗಳಲ್ಲಿ ಕೈಗೊಳ್ಳಲಾಗಿದ್ದು, 116 ದಿನಗಳಲ್ಲಿ 18 ಜಿಲ್ಲೆಗಳಲ್ಲಿನ 11 ವಿಧಾನಸಭಾ ಕ್ಷೇತ್ರ ಹಾಗೂ 6 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂವಾದ, ಸಾರ್ವಜನಿಕ ಸಭೆ, ದೇವಾಲಯ, ಸಾರ್ವಜನಿಕ ಸಭೆ, ವಿಷಯಾಧಾರಿತ ಸಭೆಗಳನ್ನು ನಡೆಸಲಾಗಿದೆ ಎಂದು ಬಂಡಿ ಸಂಜಯ್ ತಿಳಿಸಿದರು.
9,776 ಜನರನ್ನು ವೆಬ್ ಸೈಟ್ ನಲ್ಲಿ ಸೇರಿಸಿಕೊಳ್ಳಲಾಗಿದೆ. ಯಾತ್ರೆ ಸೇರಲು 42, 940 ಮಿಸ್ಡ್ ಕರೆಗಳು ಬಂದಿರುವುದಾಗಿ ಅವರು ತಿಳಿಸಿದರು. ಆದಾಗ್ಯೂ, ಬಂಡಿ ಸಂಜಯ್ ಶೀಘ್ರದಲ್ಲಿಯೇ ಬಸ್ ಯಾತ್ರೆ ಆರಂಭಿಸಲು ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
Advertisement