ನವದೆಹಲಿ: ಕೆನಡಾದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಬೆದರಿಕೆ, ಪೋಸ್ಟರ್ ಪ್ರಸಾರ ಕುರಿತು ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನರ್ ಗೆ ಭಾರತ ಸಮನ್ಸ್ ನೀಡಿದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಜಸ್ಟಿನ್ ಟ್ರುಡೊ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೆನಡಾದಲ್ಲಿರುವ ಖಾಲಿಸ್ತಾನಿ ಪರ ಹೋರಾಟಗಾರರು ಜುಲೈ 8 ರಂದು ಟೊರಂಟೊ ನಗರದಲ್ಲಿ ಫ್ರೀಡಂ ರ್ಯಾಲಿ ಆಯೋಜಿಸಿದ್ದಾರೆ. ಈ ರ್ಯಾಲಿಯ ಫೋಸ್ಟರ್ ನಲ್ಲಿ ಒಟ್ಟಾವದಲ್ಲಿರುವ ಭಾರತದ ರಾಯಭಾರ ಹಾಗೂ ಟೊರಂಟೊದಲ್ಲಿರುವ ರಾಜತಾಂತ್ರಿಕ ಅಧಿಕಾರಿ ವಿರುದ್ಧ ಬೆದರಿಕೆ ಹಾಕಲಾಗಿದೆ. ಹೀಗಾಗಿ ಭಾರತ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಪೋಸ್ಟರ್ಗಳಲ್ಲಿ ಕೆನಡಾದಲ್ಲಿ ಕಳೆದ ತಿಂಗಳು ಭಯೋತ್ಪಾದಕ, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಟೊರೊಂಟೊದ ಭಾರತೀಯ ಕಾನ್ಸುಲೇಟ್ ಜನರಲ್, ಅಪೂರ್ವ ಶ್ರೀವಾಸ್ತವ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಆರೋಪಿಸಲಾಗಿದೆ.
ಫೋಸ್ಟರ್ ಕುರಿತು ಮಾತನಾಡಿರುವ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ತಮ್ಮ ದೇಶ ಭಾರತೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ. ವಿಯನ್ನಾ ಒಪ್ಪಂದಕ್ಕೆ ತಾವು ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ.
Advertisement