ಹರಿಯಾಣ: ಸೋನಿಪತ್‌ಗೆ ರಾಹುಲ್ ಗಾಂಧಿ ಹಠಾತ್ ಭೇಟಿ, ರೈತರೊಂದಿಗೆ ಚರ್ಚೆ; ಭತ್ತ ನಾಟಿ ಮಾಡಿ ಟ್ರ್ಯಾಕ್ಟರ್ ಸವಾರಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು. ಈ ವೇಳೆ ರೈತ ಮಹಿಳೆಯರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಸೋನಿಪತ್‌ನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸೋನಿಪತ್‌ನಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Updated on

ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದರು ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು. ಈ ವೇಳೆ ರೈತ ಮಹಿಳೆಯರೊಂದಿಗೆ ಸೇರಿ ಭತ್ತ ನಾಟಿ ಮಾಡಿದರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಶನಿವಾರ ಮುಂಜಾನೆ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮವನ್ನು ತಲುಪಿದರು.

'ಇದೊಂದು ಪೂರ್ವಸಿದ್ಧತೆಯಿಲ್ಲದ ಭೇಟಿ. ಅವರು ಗ್ರಾಮಸ್ಥರು ಮತ್ತು ಹೊಲಗಳಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಂವಾದ ನಡೆಸಿದರು. ರಾಹುಲ್‌ ಜಿ ಭತ್ತ ನಾಟಿ ಕಾರ್ಯದಲ್ಲಿ ಭಾಗವಹಿಸಿದರು ಮತ್ತು ಟ್ರ್ಯಾಕ್ಟರ್ ಓಡಿಸಿದರು' ಎಂದು ಸೋನಿಪತ್‌ನ ಕಾಂಗ್ರೆಸ್ ಶಾಸಕ ಜಗ್ಬೀರ್ ಸಿಂಗ್ ಮಲಿಕ್ ಪಿಟಿಐಗೆ ಫೋನ್ ಮೂಲಕ ತಿಳಿಸಿದರು.

ಸ್ಥಳದಲ್ಲಿದ್ದ ಮಲಿಕ್, ರಾಹುಲ್ ಗಾಂಧಿ ಬಹುಶಃ ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದರು ಎಂದು ಹೇಳಿದರು.

ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ ಚಿತ್ರಗಳಲ್ಲಿ, ರಾಹುಲ್ ಗಾಂಧಿಯವರು ಬಿಳಿ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೂ ಗ್ರಾಮಸ್ಥರೊಂದಿಗೆ ಗದ್ದೆಯಲ್ಲಿಯೇ ಸಂವಾದ ನಡೆಸಿ, ಭತ್ತ ನಾಟಿ ಮಾಡಿದ್ದಾರೆ.

ರಾಹುಲ್ ಗಾಂಧಿಯವರು 'ಮೋದಿ ಉಪನಾಮ' ಕುರಿತಾದ ಹೇಳಿಕೆಯ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಈ ಹಿಂದೆ ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಮೇ 23ರಂದು ರಾಹುಲ್ ಗಾಂಧಿಯವರು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com