ನವದೆಹಲಿ: ಪಾಕಿಸ್ತಾನದ ಮಹಿಳೆಯೊಬ್ಬರು ಭಾರತದ ವ್ಯಕ್ತಿಯ ಜೊತೆ ಜೀವಿಸಲು ಭಾರತಕ್ಕೆ ನುಸುಳಿರುವ ಪ್ರಕರಣ ಈಗ ಸಾಕಷ್ಟು ಸುದ್ದಿಯಾಗುತ್ತಿದೆ.
ಈ ನಡುವೆ ಪಾಕ್ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ಹೇಳಿಕೆ ನೀಡಿದ್ದು, ಮಹಿಳೆಯೊಬ್ಬರು ಆನ್ ಲೈನ್ ನಲ್ಲಿ ಪರಿಚಯವಾದ ಹಿಂದು ವ್ಯಕ್ತಿಯ ಜೊತೆ ಜೀವಿಸಲು ಭಾರತಕ್ಕೆ ನುಸುಳಲು ಕಾರಣವಾದ ಅಂಶ ಪ್ರೀತಿಯೊಂದೇ ಎಂದು ಹೇಳಿದೆ.
ಸಿಂಧ್ ನ ಕರಾಚಿಯ ಸೀಮಾ ಗುಲಾಮ್ ಹೈದರ್ ಹಾಗೂ ಭಾರತದ ಸಚಿನ್ ಮೀನಾ ಪಬ್ ಜೀ ಮೂಲಕ 2019 ರಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಗ್ರೇಟರ್ ನೋಯ್ಡಾದ ನಿವಾಸಿಯಾಗಿರುವ ಸಚಿನ್ (22) ಪ್ರಾವಿಷನ್ ಸ್ಟೋರ್ ನ ಮಾಲಿಕರಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಸೀಮಾ ಹೈದರ್ ದೇಶವನ್ನು ತೊರೆದು ಭಾರತೀಯ ವ್ಯಕ್ತಿಯನ್ನು ವಿವಾಹವಾಗಲು ಭಾರತಕ್ಕೆ ಹೋಗಿರುವುದರ ಹಿಂದೆ ಪ್ರೀತಿಯೊಂದೇ ಕಾರಣವಾಗಿದೆ ಬೇರೆ ಯಾವುದೇ ಅಂಶಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ ಎಂದು ಪಾಕ್ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದನ್ನೂ ಓದಿ: ಪ್ರೀತಿಗಾಗಿ ಅಕ್ರಮವಾಗಿ ಭಾರತ ಪ್ರವೇಶ: ಎಟಿಎಸ್ ನಿಂದ ಪಾಕ್ ಪ್ರಜೆ ಸೀಮಾ ಹೈದರ್, ಆಕೆಯ ಪ್ರಿಯಕರನ ತೀವ್ರ ವಿಚಾರಣೆ
ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾಳನ್ನು ಆಕೆಯ ನಾಲ್ಕು ಮಕ್ಕಳ ಜೊತೆ ಜುಲೈ 4 ರಂದು ಬಂಧಿಸಲಾಗಿತ್ತು. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ನ್ನೂ ಬಂಧಿಸಲಾಗಿತ್ತು.
ಇಬ್ಬರನ್ನೂ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಸೀಮಾ ಭಾರತಕ್ಕೆ ಬಂದಿರುವುದು ಪಾಕ್ ನಲ್ಲಿಯೂ ಸುದ್ದಿಯಾಗಿದ್ದು, ಪಾಕ್ ನಲ್ಲಿ ಹಿಂದೂ ಯುವತಿಯರನ್ನು ಇಸ್ಲಾಮ್ ಗೆ ಮತಾಂತರಗೊಳಿಸುವುದಕ್ಕೇ ಖ್ಯಾತಿ ಪಡೆದಿರುವ ಸಿಂಧ್ ನ ಧರ್ಮಗುರು ಓರ್ವ ಸೀಮಾ ಪಾಕ್ ಗೆ ವಾಪಸ್ಸಾದಲ್ಲಿ ಆಕೆಯನ್ನು ಶಿಕ್ಷಿಸುವುದಾಗಿ ನೇರ ಬೆದರಿಕೆ ಹಾಕಿದ್ದಾನೆ.
ಇದಷ್ಟೇ ಅಲ್ಲದೇ ಆ ಧರ್ಮಗುರುವಿನ ಬೆಂಬಲಿಗರು ಸೀಮಾಳ ಗ್ರಾಮದಲ್ಲಿ ಹಿಂದೂ ಶ್ರದ್ಧಾ ಕೇಂದ್ರಗಳು, ದೇವಾಲಯಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು ಭಾನುವಾರದಂದು ಸಿಂಧ್ ನಲ್ಲಿರುವ ರಾಧಾ ಸ್ವಾಮಿ ದರ್ಬಾರ್ ದೇವಾಲಯದ ಮೇಲೆ ದಾಳಿ ನಡೆಸಿದ ವರದಿಗಳು ಪ್ರಕಟವಾಗಿತ್ತು.
Advertisement