ಶ್ರೀನಗರ: ರಜೆಯ ಮೇಲೆ ಬಂದಿದ್ದ ಸೇನೆಯ ಯೋಧ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ನಾಪತ್ತೆಯಾಗಿದ್ದು, ಭದ್ರತಾ ಪಡೆಗಳು ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಲಡಾಖ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಯೋಧ ಭಾನುವಾರ ಕೆಲಸಕ್ಕೆ ಮರಳಬೇಕಿತ್ತು ಎಂದು ಅವರ ತಂದೆ ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿಯಾದ ಜಾವೈದ್ ಅಹ್ಮದ್ ವಾನಿ ಶನಿವಾರ ಸಂಜೆ ನಾಪತ್ತೆಯಾಗಿದ್ದಾರೆ. ಅವರ ಕಾರು ಪ್ಯಾರನ್ಹಾಲ್ನಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಕುಟುಂಬಕ್ಕೆ ಯೋಧನೇ ಆಧಾರವಾಗಿರುವುದರಿಂದ ಅವರನ್ನು ಜೀವಂತವಾಗಿ ಬಿಡುಗಡೆ ಮಾಡುವಂತೆ ಯೋಧನ ತಂದೆ ಅಪಹರಿಸಿದವರಿಗೆ ಮನವಿ ಮಾಡಿದ್ದಾರೆ.
'ಅವರನ್ನು ಜೀವಂತವಾಗಿ ಬಿಡುವಂತೆ ನಾನು ಎಲ್ಲಾ ಸಹೋದರರಲ್ಲಿ ಮನವಿ ಮಾಡುತ್ತೇನೆ. ಆತ ಯಾರಿಗಾದರೂ ತೊಂದರೆ ನೀಡಿದ್ದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಅವರು (ಅಪಹರಣಕಾರರು) ಬಯಸಿದರೆ ನಾನು ನನ್ನ ಮಗ ಕೆಲಸ ತ್ಯಜಿಸುವಂತೆ ಮಾಡುತ್ತೇನೆ' ಎಂದು ಮೊಹಮ್ಮದ್ ಅಯೂಬ್ ವಾನಿ ಸುದ್ದಿಗಾರರಿಗೆ ತಿಳಿಸಿದರು.
ಭಾನುವಾರದಂದು ತನ್ನ ಪೋಸ್ಟಿಂಗ್ ಸ್ಥಳಕ್ಕೆ ಹಿಂತಿರುಗಲಿರುವ ಕಾರಣ ಶನಿವಾರ ಸಂಜೆ ತನ್ನ ಮಗ ಮಾಂಸ ಖರೀದಿಸಲು ಹೊರಗೆ ಹೋಗಿದ್ದ. 'ನಾಳೆ (ಭಾನುವಾರ) ಏರ್ಪೋರ್ಟ್ಗೆ ಡ್ರಾಪ್ ಮಾಡುವಂತೆ ಸಹೋದರನಿಗೆ ಹೇಳಿದ್ದನು. ಸ್ವಲ್ಪ ಸಮಯದ ನಂತರ, ಆತನ ಕಾರು ಪತ್ತೆಯಾಗಿರುವುದಾಗಿ ನಮಗೆ ಕರೆ ಬಂತು' ಎಂದು ವಾನಿ ಹೇಳಿದ್ದಾರೆ.
ಕಾರಿನಲ್ಲಿ ರಕ್ತದ ಗುರುತುಗಳಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರೂ, ಅಧಿಕಾರಿಗಳು ಅದನ್ನು ದೃಢಪಡಿಸಿಲ್ಲ.
ಯೋಧನ ರಕ್ಷಣೆಗಾಗಿ ಪೊಲೀಸರು ಕುಲ್ಗಾಮ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
Advertisement