ಹುಸಿ ಬಾಂಬ್ ಬೆದರಿಕೆ: ಎರಡು ಗಂಟೆ ದೆಹಲಿ-ಮುಂಬೈ ವಿಮಾನ ಹಾರಾಟ ವಿಳಂಬ
ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್ ನಲ್ಲಿ ಬಾಂಬ್ ಇರುವ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿರುವುದಾಗಿ ಪ್ರಯಾಣಿಕರೊಬ್ಬರು ಹೇಳಿದ ನಂತರ ದೆಹಲಿಯಿಂದ ಮುಂಬೈಗೆ ತೆರಳುವ ವಿಸ್ತಾರ ಏರ್ ಲೈನ್ಸ್ ವಿಮಾನ ಹಾರಾಟದಲ್ಲಿ ಎರಡು ಗಂಟೆಗಳ ಕಾಲ ವಿಳಂಬವಾಯಿತು. ನಂತರ ಅದು ಸುಳ್ಳು ಎಂದು ಘೋಷಿಸಲಾಯಿತು ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಬುಧವಾರ 4-55ಕ್ಕೆ ನಿರ್ಗಮಿಸಬೇಕಾಗಿದ್ದ ದೆಹಲಿ- ಮುಂಬೈ ನಡುವಿನ ವಿಮಾನ ಸಂಖ್ಯೆ ಯುಕೆ-941ರಲ್ಲಿ ಇಂತಹ ಬೆದರಿಕೆ ಕಂಡುಬಂದ ನಂತರ ನಿಲ್ದಾಣದಲ್ಲಿನ ಬಹು ಭದ್ರತೆ, ಗುಪ್ತಚರ, ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಮತ್ತು ವಾಯುಯಾನ ಏಜೆನ್ಸಿಯ ಸಮಿತಿ ಸಭೆ ಸುಮಾರು ಸಂಜೆ 6-10ರ ವೇಳೆಗೆ ನಡೆದಿತ್ತು.
ಬ್ಯಾಗ್ ನಲ್ಲಿರುವ ಬಾಂಬ್ ನ್ನು ಸಿಐಎಸ್ ಎಫ್ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಪುರುಷ ಪ್ರಯಾಣಿಕರೊಬ್ಬರು ಫೋನ್ ನಲ್ಲಿ ಹೇಳುತ್ತಿದ್ದನ್ನು ಕೇಳಿಸಿಕೊಂಡಿದ್ದಾಗಿ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವರದಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ. ದೇಶದಲ್ಲಿನ 66 ನಾಗರಿಕ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪ್ರಯಾಣಿಕರು ಮತ್ತು ಅವರ ಲಗ್ಗೇಜ್ ನ್ನು ತಪಾಸಣೆ ಮಾಡುತ್ತಾರೆ.
ವಿಮಾನದಲ್ಲಿದ್ದ ಸಿಬ್ಬಂದಿ ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ ಎಫ್ ಪಡೆಗೆ ಮಾಹಿತಿ ನೀಡಿದ್ದರಿಂದ ವಿಮಾನದ ಟೇಕಾಫ್ ಎರಡು ಗಂಟೆ ವಿಳಂಬವಾಗಿದೆ. ನಂತರ ವಿಧ್ವಂಸಕ ನಿಗ್ರಹ ಪಡೆ ಎಲ್ಲಾ ಪ್ರಯಾಣಿಕರ ಬ್ಯಾಗ್ ನ್ನು ತಪಾಸಣೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.