ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಭಾರತೀಯ ಜನತಾ ಪಾರ್ಟಿ (BJP) ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್ದೇವ ಕೂಡ ಉಪಸ್ಥಿತರಿದ್ದರು.
ಇದು ಬಿಜೆಪಿ ಕಚೇರಿಯಲ್ಲ, ಬಿಜೆಪಿಯ ಕಾರ್ಯಾಲಯ. ಇದು ಎಂದಿಗೂ ಸಾಮಾನ್ಯ ಜನರ ಬಾಗಿಲನ್ನು ಮುಚ್ಚುವುದಿಲ್ಲ. ಇದು ಬಿಜೆಪಿಯ ಸಂಸ್ಕಾರ ಕೇಂದ್ರ ಸಂಸ್ಕೃತಿಯ ಮನೆಯಾಗಿದೆ ಎಂದು ಜೆ ಪಿ ನಡ್ಡಾ ಅವರು ಬಿಜೆಪಿ ರಾಜ್ಯ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ಪ್ರಧಾನಿ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಕೇವಲ ಸರ್ಕಾರವನ್ನು ಮಾತ್ರ ಬದಲಾಯಿಸಲಿಲ್ಲ. ರಾಜಕೀಯದ ಸಂಸ್ಕೃತಿಯನ್ನೂ ಸಹ ಬದಲಾಯಿಸಿದ್ದಾರೆ. ಸಾಮಾನ್ಯ ಬಡ ಹಿನ್ನೆಲೆಯ ವ್ಯಕ್ತಿಯೊಬ್ಬರು ಪ್ರಧಾನಿಯಾಗಬಹುದು, ಪಕ್ಷದ ಮುಖ್ಯಸ್ಥ, ರಾಜ್ಯಾಧ್ಯಕ್ಷರಾಗಬಹುದು ಮತ್ತು ಸಿಎಂ ಆಗಬಹುದೆಂಬ ಸಂಸ್ಕೃತಿಯನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣದಿಂದ ನಾವು ರಿಪೋರ್ಟ್ ಕಾರ್ಡ್ ರಾಜಕಾರಣವನ್ನು ದೇಶದ ಜನತೆ ಮುಂದೆ ತೋರಿಸುತ್ತಿದ್ದೇವೆ ಎಂದರು.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ, ಎಲ್ಲಾ ಪಕ್ಷಗಳನ್ನು ನೋಡಿ, ಅವೆಲ್ಲವೂ ಅಧಿಕಾರದ ಹಿಂದೆ ಬಿದ್ದು ತಮ್ಮ ಸಿದ್ಧಾಂತಗಳಿಂದ ದೂರ ಸರಿಯುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷವೂ ಸಹ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿದೆ. ಆದರೆ ನಮ್ಮ ಪಕ್ಷವು ನಮ್ಮ ಸಿದ್ಧಾಂತದ ಮೇಲೆ ಬಲವಾಗಿ ನಿಂತಿದೆ ಎಂದರು.
Advertisement