ಗುರುಗ್ರಾಮ್: ಇಲ್ಲಿನ ಪಟೌಡಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಇಲ್ಲಿನ ದಾರಾಪುರ ಗ್ರಾಮದಲ್ಲಿ ಕೆರೆ ಅಗೆಯುತ್ತಿದ್ದ ಎಂಟು ಕಾರ್ಮಿಕರ ಮೇಲೆ ಬೆಳಗ್ಗೆ 10.30ರ ಸುಮಾರಿಗೆ ಸುಮಾರು ಆರು ಅಡಿ ಎತ್ತರದ ಮಣ್ಣಿನ ಗುಡ್ಡ ಬಿದ್ದಿತ್ತು.
ಗ್ರಾಮೀಣ ಉದ್ಯೋಗ ಯೋಜನೆ ಎಂಎನ್ಆರ್ಇಜಿಎ ಅಡಿಯಲ್ಲಿ ಅಗೆಯುವ ಕೆಲಸ ನಡೆಯುತ್ತಿತ್ತು. ಅವರಲ್ಲಿ ಏಳು ಮಂದಿ ದಿಬ್ಬದೊಳಗೆ ಸಿಲುಕಿಕೊಂಡಿದ್ದರೆ, ಕಿರಣ್ ದೇವಿ ಎಂಬಾಕೆ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಕಿರಣ್ ದೇವಿ ಘಟನೆ ಕುರಿತಂತೆ ಮಾಹಿತಿ ನೀಡಿದ್ದರಿಂದ ಗ್ರಾಮಸ್ಥರು ಸ್ಥಳಕ್ಕೆ ತಲುಪಿದರು. ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲಾ ಮಹಿಳೆಯರನ್ನು ಹೊರತೆಗೆದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಪೈಕಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರು ಮಹಿಳೆಯರು ಗುರುಗ್ರಾಮ್ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬರು ಪಟೌಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು ಪ್ರಿಯಾಂಕಾ, ಕೋಲಾ ಮತ್ತು ಬಿಲ್ಲೋ ಎಂದು ಗುರುತಿಸಲಾಗಿದೆ. ಭೂಕುಸಿತದಿಂದ ಬದುಕುಳಿದ ಕಿರಣ್ ದೇವಿ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ನಿಶಾಂತ್ ಕುಮಾರ್ ಯಾದವ್ ತಿಳಿಸಿದ್ದಾರೆ.
Advertisement