ಸ್ವಾಮಿ ಪೂರ್ಣಾನಂದ
ಸ್ವಾಮಿ ಪೂರ್ಣಾನಂದ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಸ್ವಯಂಘೋಷಿತ ದೇವಮಾನವನ ಬಂಧನ!

ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಶ್ರಮದ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರದ ಪೊಲೀಸರು ಬಂಧಿಸಿದ್ದಾರೆ. 

ವಿಶಾಖಪಟ್ಟಣಂ: ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಶ್ರಮದ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರದ ಪೊಲೀಸರು ಬಂಧಿಸಿದ್ದಾರೆ. 

15 ವರ್ಷದ ಬಾಲಕಿಯ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವೆಂಕೋಜಿಪಾಲೆಂನಲ್ಲಿರುವ ಸ್ವಾಮಿ ಜ್ಞಾನಾನಂದ ಆಶ್ರಮ, ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮುಖ್ಯಸ್ಥ ಸ್ವಾಮಿ ಪೂರ್ಣಾನಂದ (64)ನನ್ನು ಬಂಧಿಸಲಾಗಿದೆ. ಒಂದು ದಶಕದಲ್ಲಿ ಎರಡನೇ ಬಾರಿಗೆ ಈ ವ್ಯಕ್ತಿಯನ್ನು ಅತ್ಯಾಚಾರದ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. 2011ರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು.

ಪೊಲೀಸರ ಪ್ರಕಾರ, ಬಾಲಕಿಯನ್ನು ಸ್ವಾಮೀಜಿ ಒಂದು ವರ್ಷದಿಂದ ತನ್ನು ವಶದಲ್ಲಿಟ್ಟುಕೊಂಡಿದ್ದನು. ಸಂತ್ರಸ್ತೆಯನ್ನು ಪದೇ ಪದೇ ಹಿಂಸಿಸುತ್ತಾ, ಅತ್ಯಾಚಾರ ಎಸಗಿದ್ದನು. ಕೆಲಸದಾಕೆಯ ಸಹಾಯದಿಂದ ಬಾಲಕಿ ಜೂನ್ 13ರಂದು ತಪ್ಪಿಸಿಕೊಂಡು ತಿರುಮಲ ಎಕ್ಸ್‌ಪ್ರೆಸ್ ಹತ್ತಿದಳು. ಸಹ ಪ್ರಯಾಣಿಕನ ಸಹಾಯದಿಂದ ವಿಜಯವಾಡದಲ್ಲಿರುವ ದಿಶಾ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ವೈಜಾಗ್‌ಗೆ ವರ್ಗಾಯಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸಂತ್ರಸ್ತ ಬಾಲಕಿ ವಿಜಯವಾಡದಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ ಎಂದು ದಿಶಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ಸಿ ವಿವೇಕಾನಂದ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಸ್ವಾಮೀಜಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಪೋಕ್ಸೋ ಕಾಯ್ದೆಯಡಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವಿಜಯವಾಡದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಿವೇಕಾನಂದ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com