ಮಾನವ ದೋಷ: ರಾಜ್ಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿನ ಎಡವಟ್ಟಿನ ಬಗ್ಗೆ ಅಸ್ಸಾಮ್ ಸಚಿವರ ಪ್ರತಿಕ್ರಿಯೆ
ಗುವಾಹಟಿ: ಅಸ್ಸಾಂ ನಲ್ಲಿ ನಡೆದ ರಾಜ್ಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಉಂಟಾದ ಎಡವಟ್ಟಿನ ಬಗ್ಗೆ ಅಸ್ಸಾಂ ನ ಸಂಸ್ಕೃತಿ ಸಚಿವ ಬಿಮಲ್ ಬೋರಾ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಪ್ರಶಸ್ತಿ ಪ್ರದಾನದ ವೇಳೆ ಹಾಡೊಂದರ ಹಿನ್ನೆಲೆ ಗಾಯಕರಿಗೆ ಪ್ರಶಸ್ತಿಯನ್ನು ನೀಡಬೇಕಿತ್ತು. ಆದರೆ ಆ ಹಾಡಿಗೆ ಸಂಬಂಧವೇ ಪಡದ ಕಲಾವಿದೆಯೊಬ್ಬರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ನೀಡಲಾಗಿರುವುದು ಸಮಾರಂಭದಲ್ಲಿ ನಡೆದ ಎಡವಟ್ಟಾಗಿದೆ.
ಸಚಿವರು ಈ ಬಗ್ಗೆ ಸಮರ್ಥನೆ ನೀಡಿದ್ದು, ಸರಿಯಾದ ಗಾಯಕರಿಗೇ ಪ್ರಶಸ್ತಿ ನೀಡಲಾಗಿದೆ. ಆದರೆ ಪ್ರಶಸ್ತಿ ಪತ್ರದಲ್ಲಿ ಹಾಡನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ, ಅದೂ ಸಹ ಮಾನವ ಸಹಜ ದೋಷ ಎಂದು ಹೇಳಿದ್ದಾರೆ.
ಅಸ್ಸಾಮ್ ನ 8ನೇ ರಾಜ್ಯ ಸಿನಿಮಾ ಪ್ರಶಸ್ತಿಯಲ್ಲಿ ಹಿನ್ನೆಲೆ ಗಾಯನ(ಮಹಿಳೆ) ವಿಭಾಗದಲ್ಲಿ ನಹಿದ್ ಅಫ್ರಿನ್ ಅವರಿಗೆ ನಿಜನೋರ್ ಗಾನ್ ಸಿನಿಮಾಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದರು.
ಈ ಸಿನಿಮಾದಲ್ಲಿ ಆಕೆ ಹಾಡಿದ್ದು ಒಂದೇ ಹಾಡು. ಸನ್ಮಾನ ಅಥವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪರದೆಯ ಮೇಲೆ ಆಕೆ ಹಾಡದ ಹಾಡಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ವಿವಾದಕ್ಕೆ ಗುರಿಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ಆ ಪ್ರಶಸ್ತಿ ನಹೀದ್ ಅಫ್ರಿನ್ ಅವರಿಗೇ ಸಲ್ಲಬೇಕಿತ್ತು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಪರದೆಯ ಮೇಲೆ ಪ್ರಕಟವಾದ ಹಾಡು ತಪ್ಪಾಗಿತ್ತು ಇದು ಮಾನವ ದೋಷ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ