ಗೋ ಸೇವಾ ಆಯೋಗ ರಚನೆಗೆ ಮಹಾ ಸಂಪುಟ ಒಪ್ಪಿಗೆ, ಹರ್ಯಾಣ, ಯುಪಿ ಮಾದರಿಯಲ್ಲಿ ಇರಲಿದ್ದಾರೆ ಗೋ ರಕ್ಷಕರು!
ನವದೆಹಲಿ: ಬೀಫ್ ನಿಷೇಧ ಹಾಗೂ ಗೋಹತ್ಯೆ ನಿಷೇಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಗೋ ಸೇವಾ ಆಯೋಗ ರಚನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
ಮಾ.17 ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು. ಮಹಾರಾಷ್ಟ್ರ ಗೋ ಸೇವಾ ಆಯೋಗ ಜಾನುವಾರುಗಳ ಕ್ಷೇಮವನ್ನು ಗಮನಿಸಲಿದೆ ಹಾಗೂ ಯಾವುದು ಉಪಯುಕ್ತವಿಲ್ಲ, ಹಾಲು ನೀಡುತ್ತಿಲ್ಲ, ಕೃಷಿ ಚಟುವಟಿಕೆಗೆ ಉಪಯುಕ್ತವಿಲ್ಲ ಎಂಬುದರ ಮೌಲ್ಯಮಾಪನ ಮಾಡಲಿದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಯೋಗ ಸ್ಥಾಪನೆಗೆ 10 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದ್ದು, ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲು ಈ ವಾರ ಕರಡು ಮಸೂದೆಯನ್ನು ಸದನದಲ್ಲಿ ಮಂಡಿಸಲಾಗುತ್ತದೆ.
ಹರ್ಯಾಣ-ಉತ್ತರ ಪ್ರದೇಶದ ಮಾದರಿಯಲ್ಲಿ ಈ ಗೋ ಸೇವಾ ಆಯೋಗವನ್ನು ರಚಿಸಲಾಗಿದ್ದು, ಗೋಹತ್ಯೆಯನ್ನು ತಡೆಯಲು ಈ ಆಯೋಗ ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ವಹಿಸಿ ಕಾರ್ಯನಿರ್ವಹಿಸಲಿದೆ.
ಬಿಡಾಡಿ ದನಗಳು ಹಾಗೂ ಉಪಯುಕ್ತವಿಲ್ಲದ ದನಗಳಿಗೆ ಗೋಶಾಲೆಗಳನ್ನು ನಿರ್ಮಿಸುವ ವಿಷಯದಲ್ಲೂ ಈ ಆಯೋಗ ನಿಗಾ ವಹಿಸಲಿದೆ ಹಾಗೂ ಅದಕ್ಕೆ ಬೇಕಾದ ಆರ್ಥಿಕ ನೆರವನ್ನೂ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆಯೋಗಕ್ಕೆ ಓರ್ವ ಅಧ್ಯಕ್ಷರು ಇರಲಿದ್ದು, ಸರ್ಕಾರವೇ ನೇಮಕ ಮಾಡಲಿದೆ. 14 ಹಿರಿಯ ಅಧಿಕಾರಿಗಳು ಈ ಆಯೋಗದಲ್ಲಿರಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ