ಗುವಾಹಟಿ: ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(ಬಿಟಿಸಿ) ದಶಕಗಳ ಕಾಲ ನಡೆದ ಕಲಹ ಮತ್ತು ಘರ್ಷಣೆಯ ಗಾಯಗಳನ್ನು ಗುಣಪಡಿಸಲು ಹೊಸ ಆಲೋಚನೆ ಮಾಡಿದೆ.
ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ(ಬಿಟಿಆರ್)ದಲ್ಲಿ ಸಂಪೂರ್ಣ ಶಾಂತಿ ಮರುಸ್ಥಾಪಿಸುವುದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ "ಹ್ಯಾಪಿನೆಸ್ ಮಿಷನ್" ಅಡಿಯಲ್ಲಿ ಪಠ್ಯಕ್ರಮದಲ್ಲಿ ಶಾಂತಿ ಮತ್ತು ಸಂತೋಷದ ವಿಷಯವನ್ನು ಅಳವಡಿಸಲು ನಿರ್ಧರಿಸಿದೆ.
ಬಿಟಿಸಿಯು ಅಸ್ಸಾಂನ ನಾಲ್ಕು ಜಿಲ್ಲೆಗಳಾದ ಕೊಕ್ರಜಾರ್, ಚಿರಾಂಗ್, ಬಕ್ಸಾ ಮತ್ತು ಉದಲ್ಗುರಿಯನ್ನು ನಿರ್ವಹಿಸುತ್ತದೆ.
ಗುರುವಾರ ತಮುಲ್ಪುರದಲ್ಲಿ ನಡೆಯುತ್ತಿರುವ 4ನೇ ಏಷ್ಯನ್ ಖೋ ಖೋ ಚಾಂಪಿಯನ್ಶಿಪ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಿಟಿಸಿ ಮುಖ್ಯಸ್ಥ ಪ್ರಮೋದ್ ಬೋಡೊ, ಹ್ಯಾಪಿನೆಸ್ ಮಿಷನ್, ಗುಣಪಡಿಸುವುದು, ಆಲಿಸುವುದು ಮತ್ತು ಚರ್ಚೆಗಳಿಗೆ ಒತ್ತು ನೀಡುತ್ತದೆ ಎಂದಿದ್ದಾರೆ.
ಬೋಡೋಲ್ಯಾಂಡ್ ವಿಶ್ವವಿದ್ಯಾಲಯದ ಜ್ಞಾನ ಕೇಂದ್ರದಲ್ಲಿ ಶಾಂತಿ ಮತ್ತು ಸಂತೋಷದ ವಿಷಯವನ್ನು ಸೇರಿಸುವುದರೊಂದಿಗೆ ಏಪ್ರಿಲ್ನಲ್ಲಿ ಹ್ಯಾಪಿನೆಸ್ ಮಿಷನ್ ಅನ್ನು ಪ್ರಾರಂಭಿಸಲಾಗುವುದು. ಇತ್ತೀಚೆಗೆ ನಡೆದ ಬೋಡೋಲ್ಯಾಂಡ್ ಅಂತರಾಷ್ಟ್ರೀಯ ಜ್ಞಾನೋತ್ಸವದಲ್ಲಿ ಈ ಕುರಿತು ಘೋಷಣೆ ಮಾಡಲಾಗಿದೆ ಎಂದರು.
"ಸಂತೋಷವು ಜೀವನದಲ್ಲಿ ಅತ್ಯಂತ ಪ್ರಮುಖವಾಗಿದೆ. ಆದರೆ ದೇಶದಲ್ಲಿ ಎಲ್ಲಿಯೂ ಇದನ್ನು ಕಲಿಸದಿರುವುದು ನನಗೆ ಆಶ್ಚರ್ಯ ತಂದಿದೆ. ನಾವು ಹ್ಯಾಪಿನೆಸ್ ಮಿಷನ್ನಲ್ಲಿ ಸರ್ಕಾರದ ಆಡಳಿತ ಯಂತ್ರಗಳ ಜೊತೆಗೆ ಮಾಜಿ ದಂಗೆಕೋರರು ಸೇರಿದಂತೆ ಸಮಾಜದ ಪ್ರತಿಯೊಂದು ವಿಭಾಗವನ್ನು ಒಳಗೊಳ್ಳುತ್ತೇವೆ ಎಂದು ಬೋಡೊ ಹೇಳಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಶಾಂತಿ-ಸಂತೋಷದ ವಿಷಯ ಬೋಧಿಸಲಾಗುವುದು ಎಂದರು.
Advertisement