ಬೆರ್ಹಾಮ್ಪುರ: ಕಂಧಮಾಲ್ ಜಿಲ್ಲೆಯ ವ್ಯಕ್ತಿಯೊಬ್ಬ ಕೌಟುಂಬಿಕ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನನೊಂದು ಹೆಚ್ಚಿನ ಪ್ರಮಾಣದ ಗಾಂಜಾ ಸೇವಿಸಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.
ಮೊಬೈಲ್ನಲ್ಲಿ ಸೆರೆಹಿಡಿದ ಆತನ ಕೃತ್ಯದ ವಿಡಿಯೋವನ್ನು ಗ್ರಾಮಸ್ಥರು ತೋರಿಸುವವರೆಗೂ ಅಮಲಿನಲ್ಲಿದ್ದ ಪ್ರದೀಪ್ ನಾಯಕ್ ಎಂಬಾತನಿಗೆ ತಾನೇ ಬೆಂಕಿ ಹಚ್ಚಿರುವುದು ತಿಳಿದಿರಲಿಲ್ಲ. ಶನಿವಾರ ರಾತ್ರಿ ಸಹಜ್ಖಾಲ್ನಲ್ಲಿ ಈ ಘಟನೆ ನಡೆದಿದ್ದು, ಗಂಜಾಂ-ಕಂಧಮಾಲ್ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ಗ್ರಾಮವಿರುವುದರಿಂದ ಸೋಮವಾರ ಈ ಘಟನೆ ಮುನ್ನೆಲೆಗೆ ಬಂದಿದೆ.
ಮೂಲಗಳ ಪ್ರಕಾರ, ಪ್ರದೀಪ್ ಅವರ ಮೂರು ಕೋಣೆಗಳಿದ್ದ ಹುಲ್ಲಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಸಮೀಪದ ಭಂಜಾನಗರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಮನೆಯ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಿದ್ದರು. ಪ್ರದೀಪ್ ಅವರ ಮನೆ ಗ್ರಾಮದಿಂದ ದೂರದಲ್ಲಿರುವುದರಿಂದ ಬೆಂಕಿ ಇತರ ಮನೆಗಳಿಗೆ ಹರಡಿಲ್ಲ.
ಇದಾದ ನಂತರ, ಪ್ರದೀಪ್ ನಿರಾಶ್ರಿತರಾದರು ಮತ್ತು ಅವರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತಾತ್ಕಾಲಿಕ ಆಶ್ರಯದಲ್ಲಿ ಇದ್ದರು. ಕಂದಾಯ ನಿರೀಕ್ಷಕರೊಂದಿಗೆ ಸ್ಥಳೀಯ ಸರಪಂಚ್ ಮತ್ತು ಪಂಚಾಯತ್ ವಿಸ್ತರಣಾಧಿಕಾರಿಗಳು ಆಹಾರ ಮತ್ತು ಪಾಲಿಥಿನ್ ಶೀಟ್ ಅನ್ನು ಒದಗಿಸಿ, ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.
ಆದರೆ, ಅವರು ಹೋದ ನಂತರ, ಗ್ರಾಮದ ಯುವಕನೊಬ್ಬ ಪ್ರದೀಪ್ನನ್ನು ಭೇಟಿಯಾಗಿ, ಘಟನೆಯನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದೇನೆ ಎಂದು ತಿಳಿಸಿದ್ದಾನೆ. ಅದರಲ್ಲಿ, ಪ್ರದೀಪ್ ತಾನೇ ಮನೆಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ಕ್ಲಿಪ್ಪಿಂಗ್ ನೋಡಿದ ನಂತರ, ಪ್ರದೀಪ್ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆಸ್ತಿ ವಿವಾದದಿಂದಾಗಿ ತೆಲೆಕೆಡಿಸಿಕೊಂಡಿದ್ದ ಆತ ಶನಿವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಸೇದಿದ್ದಾನೆ. ನಂತರ, ತನ್ನ ಕುಟುಂಬವನ್ನು ಮನೆಯಿಂದ ಹೊರಗೆ ಬರುವಂತೆ ಕೇಳಿದ್ದಾನೆ ಮತ್ತು ತಾನೇ ಮನೆಗೆ ಬೆಂಕಿ ಹಚ್ಚಿದ್ದಾನೆ.
Advertisement