ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಹಾಗೂ ಅಮರಾವತಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದು 17ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಮಂಗಳವಾರ ಬೆಳಗ್ಗೆ ಕಂಟೈನರ್ ಟ್ರಕ್ಗೆ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಯ ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಸಿಂಧಖೇಡ್ ರಾಜಾ ಪಟ್ಟಣದ ಬಳಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (MSRTC) ಸೇರಿದ ಬಸ್ ಪುಣೆಯಿಂದ (ಬುಲ್ಧಾನ) ಮೆಹ್ಕರ್ ಕಡೆಗೆ ಹೋಗುತ್ತಿದ್ದಾಗ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ಬಸ್ ಪ್ರಯಾಣಿಕರು ಮತ್ತು ಉಭಯ ವಾಹನಗಳ ಚಾಲಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಾಯಾಳುಗಳನ್ನು ಸಿಂಧಖೇಡ್ ರಾಜಾ ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದೆ.
ಅಮರಾವತಿಯಲ್ಲಿ ಒಂದೇ ಕುಟುಂಬದ ಐವರ ದುರ್ಮರಣ
ಮತ್ತೊಂದೆಡೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ ಎಸ್ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮರಾವತಿಯ ಖಲ್ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಯಾಪುರ-ಅಂಜಂಗಾವ್ ರಸ್ತೆಯಲ್ಲಿ ಸೋಮವಾರ ರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದರ್ಯಾಪುರಕ್ಕೆ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement