ತಿರುಪತಿ: ಆಂಧ್ರಪ್ರದೇಶ ಪೊಲೀಸರು ಸೋಮವಾರ ತಿರುಪತಿ ಜಿಲ್ಲೆಯಲ್ಲಿ ಐದು ಟನ್ಗೂ ಹೆಚ್ಚು ರಕ್ತ ಚಂದನ ಮರದ ದಿಮ್ಮಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಐವರು ಕಳ್ಳರ ತಂಡವನ್ನು ಬಂಧಿಸಿದ್ದಾರೆ. ಬಂಧಿತರಿಂದ 4.3 ಕೋಟಿ ರೂಪಾಯಿ ಮೌಲ್ಯದ ರಕ್ತ ಚಂದನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 16ರಲ್ಲಿ (ಎನ್ಎಚ್-16) ಪೆದ್ದ ಪನ್ನಂಗಡುವಿನ ತಡಾ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಮುರುಗಾನಂದ್ (42), ಹೇಮಂತ್ ಕುಮಾರ್ (37), ರವಿ (31), ವಿಮಲ್ (32) ಮತ್ತು ಸುರೇಂದರ್ (33)ನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಂಧ್ರಪ್ರದೇಶ ಮತ್ತು ತಮಿಳುನಾಡು ನಡುವಿನ ಗಡಿ ಚೆಕ್ಪೋಸ್ಟ್ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರೆಲ್ಲರೂ ತಮಿಳುನಾಡಿನ ಚೆನ್ನೈ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
"ವಾಹನಗಳನ್ನು ಪರಿಶೀಲಿಸುವಾಗ, ಪೊಲೀಸರು ತಿರುಪತಿಯಿಂದ ತಮಿಳುನಾಡು ಕಡೆಗೆ ತೆರಳುತ್ತಿದ್ದ ವಾಹನವನ್ನು ತಡೆದಿದ್ದಾರೆ ಮತ್ತು ಅದರಲ್ಲಿದ್ದ 5,388 ಕೆಜಿ ತೂಕದ 275 ರಕ್ತ ಚಂದನ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಪಿ ಪರಮೇಶ್ವರ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement