ಮುಜಾಫರ್ಪುರ: ಜನಸಂಖ್ಯೆ ನಿಯಂತ್ರಿಸಲು ಮಹಿಳಾ ಶಿಕ್ಷಣದ ಮಹತ್ವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಮುಜಾಫರ್ಪುರ ನ್ಯಾಯಾಲಯದಲ್ಲಿ ಬುಧವಾರ ಕೇಸ್ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿ ಮತ್ತು ವಕೀಲರಾದ ಅಮಿತಾಬ್ ಕುಮಾರ್ ಸಿಂಗ್ ಅವರು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಲಾಲ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ನನ್ನ ಅರ್ಜಿಯನ್ನು ಅಂಗೀಕರಿಸಲಾಗಿದೆ ಮತ್ತು ನ್ಯಾಯಾಲಯವು ನವೆಂಬರ್ 25 ರಂದು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ದೇಶದ ಪ್ರಧಾನಿಯಾಗಲು ಬಯಸುವ ಮುಖ್ಯಮಂತ್ರಿಯೊಬ್ಬರ ಅವಿವೇಕದ ಹೇಳಿಕೆಗಳನ್ನು ಕೇಳಿದ ನಂತರ ನಾನು ನೋವಿನಿಂದ ಈ ಪ್ರಕರಣ ದಾಖಲಿಸಿದ್ದೇನೆ. ಸಾಮಾನ್ಯವಾಗಿ ಸಂಸತ್ತಿನಲ್ಲಿ ಅಥವಾ ರಾಜ್ಯ ವಿಧಾನಸಭೆಯ ಒಳಗೆ ಮಾತನಾಡುವ ಮಾತುಗಳಿಗೆ ಕಾನೂನಿನ ವಿನಾಯಿತಿ ಇದೆ. ಆದರೆ, ನನ್ನ ಅರ್ಜಿಯನ್ನು ಕೋರ್ಟ್ ಒಪ್ಪಿಗೆ. ಏಕೆಂದರೆ ರಾಜಕೀಯ ಪೈಪೋಟಿಯ ಹೇಳಿಕೆ ಅಲ್ಲ’’ ಎಂದು ಅವರು ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಬಿಹಾರ ಸಿಎಂ, ಶಿಕ್ಷಣ ಪಡೆದ ಮಹಿಳೆಯರು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಲ್ಲಳು ಎಂಬುದನ್ನು ವಿವರಿಸಿದ್ದರು. ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಆದರೆ, ಶಿಕ್ಷಣ ಪಡೆದ ಮಹಿಳೆಯು ಪತಿಯನ್ನು ನಿರ್ಬಂಧಿಸುವ ಕುರಿತು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದೇ ಕಾರಣ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದರು. ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.
Advertisement