ನವದೆಹಲಿ: ದುಬೈಗೆ ಪರಾರಿಯಾಗುವಂತೆ ಸಿಎಂ ಭೂಪೇಶ್ ಬಘೇಲ್ ಅವರೇ ನನಗೆ ಸಲಹೆ ನೀಡಿದ್ದರು ಎಂದು ಮಹಾದೇವ್ ಬೆಟ್ಟಿಂಗ್ ಆ್ಯಪ್ ಮಾಲೀಕ ಶುಭಂ ಸೋನಿ ಹೇಳಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್ ಅವರಿಗೆ ಬಲವಾಗಿ ಸುತ್ತಿಕೊಳ್ಳುತ್ತಿದ್ದು, ಇಡಿ ತನಿಖೆ ತೀವ್ರವಾಗುತ್ತಿದ್ದಂತೆಯೇ ಇದೀಗ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿರುವ ಆರೋಪಿ ಶುಭಂ ಸೋನಿ ದುಬೈನಿಂದ ವಿಡಿಯೋ ಮಾಡಿದ್ದು, ಅದರಲ್ಲಿ ಭೂಪೇಶ್ ಬಘೇಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೋನಿ ಹೇಳಿಕೆ ಇದೀಗ ವೈರಲ್ ಆಗುತ್ತಿದ್ದು, ಛತ್ತೀಸ್ ಗಢ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಲಿ ಇರುವ ಪರಿಸ್ಥಿತಿಗಳಲ್ಲಿ ಛತ್ತೀಸ್ಗಢದಲ್ಲಿ ಮಾತ್ರ ಕಾಂಗ್ರೆಸ್ ಬಲಿಷ್ಠವಾಗಿದೆ. ಆದರೆ ಈ ಬೆಟ್ಟಿಂಗ್ ಆ್ಯಪ್ ಪ್ರಕರಣ ಅಲ್ಲೂ ಕಾಂಗ್ರೆಸ್ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಭಾರಿ ಅವವಹಾರ ಕಂಡುಬಂದಿದ್ದು, ಪ್ರಮುಖವಾಗಿ ಸಿಎಂ ಬಗೇಲ್ ವಿರುದ್ದ ನೂರಾರು ಕೋಟಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಆ್ಯಪ್ ಮಾಲೀಕ ಶುಭಂ ಸೋನಿ ಅದನ್ನು ದುಬೈನಿಂದ ಭೂಪೇಶ್ ಬಘೇಲ್ಗಾಗಿ ಹಣ ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇಡಿ ಮೂಲಗಳ ಪ್ರಕಾರ ಬಘೇಲ್ ಅವರಿಗೆ ಸೋನಿ ಶುಭಂ ಸುಮಾರು 508 ಕೋಟಿ ರೂ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಅಸೀಮ್ ದಾಸ್ ಎಂಬ ಕೊರಿಯರ್ನಿಂದ 5.39 ಕೋಟಿ ನಗದನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಏಜೆನ್ಸಿಯ ಪ್ರಕಾರ, ಶುಭಂ ಸೋನಿ ಅದನ್ನು ದುಬೈನಿಂದ ಭೂಪೇಶ್ ಬಘೇಲ್ಗಾಗಿ ಕಳುಹಿಸಿದ್ದಾರೆ ಎಂದು ಬಂಧಿತ ವ್ಯಕ್ತಿ ಹೇಳಿಕೆ ನೀಡಿದ್ದ. ಬೆಟ್ಟಿಂಗ್ ಆ್ಯಪ್ಗೆ ಲಿಂಕ್ ಆಗಿರುವ ಕೆಲವು ಬೇನಾಮಿ ಬ್ಯಾಂಕ್ ಖಾತೆಗಳನ್ನು ಸಹ ಪತ್ತೆ ಮಾಡಲಾಗಿದ್ದು, ಅವುಗಳಲ್ಲಿ ಸುಮಾರು 15.59 ಕೋಟಿ ಮೊತ್ತವನ್ನು ಪತ್ತೆ ಮಾಡಿ ಅದನ್ನು ಸ್ಥಗಿತಗೊಳಿಸಲಾಗಿದೆ.
ಅಸೀಂ ದಾಸ್ ಅವರ ಫೋರೆನ್ಸಿಕ್ ಪರೀಕ್ಷೆ, ಅವರ ಸೆಲ್ ಫೋನ್ ಮತ್ತು ಶುಭಂ ಸೋನಿ ಅವರು ಕಳುಹಿಸಿದ ಇ-ಮೇಲ್ ಅನ್ನು ಪರಿಶೀಲಿಸಿದ ನಂತರ, “ಈ ಹಿಂದೆ ನಿಯಮಿತ ಪಾವತಿಗಳನ್ನು ಮಾಡಲಾಗಿದೆ ಮತ್ತು ಇದುವರೆಗೆ ಸುಮಾರು 508 ಕೋಟಿಯನ್ನು ಮಹಾದೇವ್ ಆಪ್ ಪ್ರಚಾರಕರು ಪಾವತಿಸಿದ್ದಾರೆ ಎಂದು ಕಂಡುಬಂದಿದೆ.
Advertisement