ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 5ನೇ ದಿನವೂ ಮುಂದುವರೆದಿದೆ.
ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ರಕ್ಷಣಾ ಕಾರ್ಯಾಚರಣೆಯನ್ನು ಪ್ರಧಾನಿ ಮೋದಿ ಮೇಲ್ವಿಚಾರಣೆ ಮಾಡುತ್ತಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆಂದು ಹೇಳಿದರು.
ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ರಕ್ಷಣೆಗೆ ಎಲ್ಲಾ ರೀತಿಯ ವ್ಯವಸ್ಥೆಗಳ ಮಾಡಲಾಗಿದೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಎನ್ಎಚ್ಐಡಿಸಿಎಲ್ನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಪ್ರಧಾನಿ ಮೋದಿ ಅವರು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾರೆ ನಮ್ಮೆಲ್ಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಎಲ್ಲಾ ರೀತಿಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆಂದು ತಿಳಿಸಿದರು.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ನಮ್ಮಿಂದ ಸಾಧ್ಯವಾದದ್ದೆಲ್ಲವನ್ನೂ ನಾವು ಮಾಡುತ್ತಿದ್ದೇವೆ. ಅರ್ಧ ಗಂಟೆಗೆ ಮೂರು ಮೀಟರ್ ನಷ್ಟು ಡ್ರಿಲ್ಲಿಂಗ್ ನಡೆಸಲಾಗುತ್ತಿದೆ. ಆದರೆ, ಈ ವೇಗ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ನಿಖರ ಸಮಯವೆಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗದ ಒಂದು ಭಾಗವು ಭಾನುವಾರ ನಸುಕಿನಲ್ಲಿ ಭೂಕುಸಿತ ಕಂಡಿತ್ತು.
ಪರಿಣಾಮ ಸ್ಥಳದಲ್ಲಿ ಕಾಮಗಾರಿ ಕಾರ್ಯ ನಡೆಸುತ್ತಿದ್ದ 40 ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. 40 ಕಾರ್ಮಿಕರಲ್ಲಿ 15 ಮಂದಿ ಜಾರ್ಖಂಡ್, ಮೂವರು ಬಿಹಾರ, ನಾಲ್ವರು ಬಂಗಾಳ, ಇಬ್ಬರು ಉತ್ತರಾಖಂಡ, ಒಬ್ಬರು ಹಿಮಾಚಲ, ಉತ್ತರ ಪ್ರದೇಶದ 8, ಅಸ್ಸಾಂನ ಇಬ್ಬರು ಮತ್ತು ಒಡಿಶಾದ ಐವರು ಸೇರಿದ್ದಾರೆ.
Advertisement