ಜಾರ್ಖಂಡ್: ಭಾರಿ ಅಗ್ನಿ ಅವಘಡದಲ್ಲಿ ಆರು ವರ್ಷದ ಬಾಲಕಿ ಸಜೀವ ದಹನ, ನಾಲ್ವರ ಸ್ಥಿತಿ ಗಂಭೀರ
ಹಜಾರಿಬಾಗ್: ಜಾರ್ಖಂಡ್ನ ಹಜಾರಿಬಾಗ್ ಪಟ್ಟಣದಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅವಘಡದಲ್ಲಿ ಆರು ವರ್ಷದ ಬಾಲಕಿ ಸುಟ್ಟು ಕರಕಲಾಗಿದ್ದು, ಇತರ ನಾಲ್ವರು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಾಳವಿಯಾ ಮಾರ್ಗದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಸಂಜೆ ಕಾರ್ತಿಕ ಪೌರ್ಣಮಿ ಅಂಗವಾಗಿ ಜನರು 'ದಿಯಾಸ್' (ಮಣ್ಣಿನ ದೀಪಗಳು) ಹಚ್ಚಿದ ವೇಳೆ ದುರ್ಘಟನೆ ನಡೆದಿದೆ.
ಮಾರುಕಟ್ಟೆ ಪ್ರದೇಶದಲ್ಲಿನ ಖಾಸಗಿ ನಿವಾಸವೊಂದರಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಪಕ್ಕದ ಕಟ್ಟಡಗಳಿಗೆ ಹರಡಿತು. ಮಧ್ಯರಾತ್ರಿವರೆಗೂ ಮುಂದುವರಿದ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಂದಿಸಲಾಯಿತು ಎಂದು ಹಜಾರಿಬಾಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೌಥೆ ತಿಳಿಸಿದ್ದಾರೆ.
ಅಣ್ಣು ಎಂದು ಗುರುತಿಸಲಾದ ಆರು ವರ್ಷದ ಬಾಲಕಿ ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ