350 ವರ್ಷಗಳ ನಂತರ, ಛತ್ರಪತಿ ಶಿವಾಜಿಯ 'ಹುಲಿ ಉಗುರು' ಶಸ್ತ್ರ ಮರಳಿ ಭಾರತಕ್ಕೆ!

ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಾಘ್ ನಖ್ ಅಥವಾ ಹುಲಿ ಉಗುರು ಮಾದರಿ ಅಸ್ತ್ರ ಬರೊಬ್ಬರಿ 350 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿದೆ.
ಶಿವಾಜಿ ಮಹಾರಾಜರ ವಾಘ್ ನಖ್
ಶಿವಾಜಿ ಮಹಾರಾಜರ ವಾಘ್ ನಖ್

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಾಘ್ ನಖ್ ಅಥವಾ ಹುಲಿ ಉಗುರು(ವ್ಯಾಘ್ರನಖ) ಮಾದರಿ ಅಸ್ತ್ರ ಬರೊಬ್ಬರಿ 350 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿದೆ.

1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ್ದ 'ಹುಲಿ ಉಗುರು' ಆಯುಧವು ನವೆಂಬರ್‌ನಲ್ಲಿ ಲಂಡನ್‌ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಎಂದು ಹೇಳಲಾಗಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಹುಲಿ ಪಂಜದ ಆಯುಧ ವ್ಯಾಘ್ರನಖವನ್ನು ಮರಳಿ ತರಲಾಗುತ್ತಿದೆ.

ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು "ಮೊದಲ ಹಂತದಲ್ಲಿ, ನಾವು ಶಿವಾಜಿ ಮಹಾರಾಜರ ವಾಘ್ ನಖ್ (ವ್ಯಾಘ್ರನಖ) ಅನ್ನು ಮರಳಿ ತರುತ್ತಿದ್ದೇವೆ. ಅದನ್ನು ನವೆಂಬರ್‌ನಲ್ಲಿ ಇಲ್ಲಿಗೆ ತರಬೇಕು ಮತ್ತು ಅದಕ್ಕಾಗಿ ನಾವು ಎಂಒಯು (ಒಪ್ಪಂದ)ಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನ" ಎಂದು ಸಚಿವ ಮುಂಗಂತಿವಾರ್ ಹೇಳಿದರು.

ವಾಘ್ ನಖ್ ಅನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ.

ಐತಿಹಾಸಿಕ ಹಿನ್ನಲೆ
1659 ರಲ್ಲಿ ಪ್ರತಾಪಗಡ ಕದನದಲ್ಲಿ ಮರಾಠರ ವಿಜಯವು ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸುವ ಛತ್ರಪತಿ ಶಿವಾಜಿಯ ಅಭಿಯಾನದಲ್ಲಿ ಒಂದು ಮಹತ್ವದ ತಿರುವು. ಸೈನಿಕರ ಸಂಖ್ಯೆ ಕಡಿಮೆಯ ಹೊರತಾಗಿಯೂ, ಮರಾಠರು ಅಫ್ಜಲ್ ಖಾನ್ ನೇತೃತ್ವದ ಆದಿಲ್ಶಾಹಿ ಪಡೆಗಳನ್ನು ಸೋಲಿಸಿದರು, ಛತ್ರಪತಿ ಶಿವಾಜಿಯ ಅದ್ಭುತ ಮಿಲಿಟರಿ ತಂತ್ರಗಾರಿಕೆಗೆ ಈ ಯುದ್ಧ ಸಾಕ್ಷಿಯಾಗಿತ್ತು. 

ಇಂದಿನ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆಯ ತಪ್ಪಲಿನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್ನನ್ನು ಕೊಂದರು. ಛತ್ರಪತಿ ಶಿವಾಜಿಯ ಶೌರ್ಯ ಮತ್ತು ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ಶತ್ರುವನ್ನು ಸೋಲಿಸುವ ತಂತ್ರವನ್ನು ಸಂಕೇತಿಸುವ ಈ ಪ್ರಸಂಗವು ಅಂದಿನಿಂದ ಜಾನಪದದ ಭಾಗವಾಗಿದೆ. ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಬೆನ್ನಿಗೆ (ಸಭೆಯ ಸಮಯದಲ್ಲಿ) ಇರಿದಾಗ, ಶಿವಾಜಿ ಮಹಾರಾಜ್ ಕ್ರೂರ, ರಾಕ್ಷಸ ಅಫ್ಜಲ್ ಖಾನ್ ಅನ್ನು ಕೊಲ್ಲಲು 'ವಾಘ್ ನಖ್' ಅನ್ನು ಬಳಸಿದ್ದರು ಎಂದು ಹೇಳಲಾಗಿದೆ.

ವಾಘ್ ನಖ್ ಅಸಲಿಯೋ ನಕಲಿಯೋ
ಇನ್ನು ಹಾಲಿ ವಾಘ್ ನಖ್ ಮೇಲೂ ಗುಮಾನಿ ಮೂಡುತ್ತಿದ್ದು, ವಾಘ್ ನಖ್' ನ ಸತ್ಯಾಸತ್ಯತೆ ಮಹಾರಾಷ್ಟ್ರದಲ್ಲಿ ಭಾರಿ ಚರ್ಚೆಯಲ್ಲಿದೆ. ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ವೆಬ್‌ಸೈಟ್ ಛತ್ರಪತಿ ಶಿವಾಜಿ ಆಯುಧವನ್ನು ಬಳಸಿಲ್ಲ ಎಂದು ಹೇಳುತ್ತದೆ ಎಂದು ಇತಿಹಾಸ ತಜ್ಞ ಇಂದರ್‌ಜಿತ್ ಸಾವಂತ್ ಗಮನಸೆಳೆದಿದ್ದಾರೆ. ಇದೇ ಕಾರಣಕ್ಕೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ 'ವಾಘ್ ನಖ್' ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ ಇದು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಚುನಾವಣಾ ಗಿಮಿಕ್ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com