ನವದೆಹಲಿ: ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಭಾರತದಲ್ಲೂ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆ ಕೆಲವು ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದ ನಂತರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಹಮಾಸ್ ಬಂಡುಕೋರರೊಂದಿಗೆ ಇಸ್ರೇಲ್ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟಿಎನ್ಐಇಗೆ ಖಚಿತಪಡಿಸಿದ್ದಾರೆ.
'ನಾವು ಹಲವಾರು ನಿರ್ಣಾಯಕ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದೇವೆ ಮತ್ತು ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಹಗಲಿರುಳು ನಿಗಾ ಇರಿಸಿದ್ದೇವೆ' ಎಂದು ಅಧಿಕಾರಿ ಹೇಳಿದರು.
ನಗರದಲ್ಲಿರುವ ಯಹೂದಿ ಸಂಸ್ಥೆಗಳ ಸುತ್ತಲೂ ಪೊಲೀಸರು ತೀವ್ರ ಬಂದೋಬಸ್ತ್ ಮಾಡಿದ್ದಾರೆ.
ಈಮಧ್ಯೆ, ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ 'ಆಪರೇಷನ್ ಅಜಯ್' ಅಡಿಯಲ್ಲಿ ಇಸ್ರೇಲ್ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು, ಆಪರೇಷನ್ ಅಜಯ್ ಅಡಿಯಲ್ಲಿ 212 ನಾಗರಿಕರನ್ನು ಹೊತ್ತ ಮೊದಲ ವಿಮಾನವು ಶುಕ್ರವಾರ ಮುಂಜಾನೆ ದೆಹಲಿಗೆ ಪ್ರವೇಶಿಸಿದೆ ಎಂದಿದ್ದಾರೆ.
ಅಕ್ಟೋಬರ್ 7 ರಂದು, ಹಮಾಸ್ ಬಂಡುಕೋರರು 'ಆಪರೇಷನ್ ಅಲ್-ಅಕ್ಸಾ ಫ್ಲಡ್' ಎಂಬ ಮಾರಣಾಂತಿಕ ಆಕ್ರಮಣಕಾರಿ ಹೆಸರಿನಲ್ಲಿ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳಿಗೆ ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಸಾವಿರಾರು ರಾಕೆಟ್ಗಳನ್ನು ಹಾರಿಸಿದರು.
ಅಂದಿನಿಂದ ಇಸ್ರೇಲ್ ದಾಳಿಗೆ ಪ್ರತಿಯಾಗಿ ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯ ಮೇಲೆ ಭಾರಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಅನ್ನು 'ಪುಡಿಮಾಡಿ ನಾಶಪಡಿಸುವುದಾಗಿ' ಪ್ರತಿಜ್ಞೆ ಮಾಡಿದ್ದಾರೆ.
2.3 ಮಿಲಿಯನ್ ನಿವಾಸಿಗಳು ವಾಸವಾಗಿರುವ ಸಣ್ಣ (140 ಚದರ ಮೈಲಿಗಳು) ಕರಾವಳಿ ಪ್ರದೇಶವಾದ 15 ವರ್ಷಗಳಿಗೂ ಹೆಚ್ಚು ಕಾಲ ನಿರ್ಬಂಧಿಸಲ್ಪಟ್ಟಿದ್ದ ಗಾಜಾದ ಮೇಲಿನ ದಾಳಿಯಲ್ಲಿ ನಾಗರಿಕರು ಬೆಲೆ ತೆತ್ತುತ್ತಿದ್ದಾರೆ ಎಂದು ಪ್ಯಾಲೆಸ್ಟೀನಿಯಾದವರು ಹೇಳುತ್ತಾರೆ. ಯುದ್ಧವು ಈಗಾಗಲೇ ಎರಡೂ ಕಡೆಯ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.
Advertisement