ಚೆನ್ನೈ: ಜಲಸಂಪನ್ಮೂಲ ಸಚಿವ ದುರೈಮುರುಗನ್ ನೇತೃತ್ವದ ಸರ್ವಪಕ್ಷಗಳ ತಮಿಳುನಾಡು ಸಂಸದರ ನಿಯೋಗ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿ, ಬಾಕಿ ಇರುವ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡು 15 ದಿನಗಳಿಗೆ 12,500 ಕ್ಯೂಸೆಕ್ ನೀರು ಹರಿಸುವಂತೆ ಕೋರಿತ್ತು. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಶೇಖಾವತ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದುರೈಮುರುಗನ್, ಕರ್ನಾಟಕವು ತಮಿಳುನಾಡಿಗೆ ನೀರು ಬಿಡುವಂತೆ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗೆ ದೃಢವಾದ ಸೂಚನೆಗಳನ್ನು ನೀಡಬೇಕೆಂದು ನಿಯೋಗ ಬಯಸಿದೆ ಎಂದು ಹೇಳಿದರು.
ತಮಿಳುನಾಡಿಗೆ 12,500 ಕ್ಯೂಸೆಕ್ ನೀರು ಬಿಡಬೇಕು ಎಂದು ಸಿಡಬ್ಲ್ಯುಆರ್ಸಿ ಲೆಕ್ಕಾಚಾರ ಮಾಡಿದೆ. ನದಿ ಪಾತ್ರದ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಲು ಕರ್ನಾಟಕವು ತಮಿಳುನಾಡಿಗೆ ಕನಿಷ್ಠ ನೀರನ್ನು ಬಿಡಬೇಕು. ಸೆಪ್ಟೆಂಬರ್ 21 ರಂದು ಪ್ರಕರಣದ ವಿಚಾರಣೆ ವೇಳೆ ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ತನ್ನ ವಾದವನ್ನು ಮಂಡಿಸಲಿದೆ ಎಂದು ದುರೈಮುರುಗನ್ ಹೇಳಿದರು.
Advertisement