ರಾಜ್ಯಸಭೆಯ ಸಂದರ್ಶಕರ ಗ್ಯಾಲರಿಯಿಂದ 'ರಾಜಕೀಯ ಘೋಷಣೆ'; ಜಗದೀಪ್‌ ಧನಕರ್‌ಗೆ ಜೈರಾಮ್ ರಮೇಶ್ ಪತ್ರ, ಕ್ರಮಕ್ಕೆ ಒತ್ತಾಯ

ಸೆಪ್ಟೆಂಬರ್ 21 ರಂದು ಮೇಲ್ಮನೆಯ ಸಂದರ್ಶಕರ ಗ್ಯಾಲರಿಯಲ್ಲಿದ್ದ ಜನರ ಗುಂಪಿನಿಂದ 'ರಾಜಕೀಯ ಘೋಷಣೆ' ಕೂಗಿದ ಘಟನೆಯ ಬಗ್ಗೆ ತುರ್ತು ಕ್ರಮಕ್ಕೆ ಒತ್ತಾಯಿಸಿ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾನುವಾರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್

ನವದೆಹಲಿ: ಸೆಪ್ಟೆಂಬರ್ 21 ರಂದು ಮೇಲ್ಮನೆಯ ಸಂದರ್ಶಕರ ಗ್ಯಾಲರಿಯಲ್ಲಿದ್ದ ಜನರ ಗುಂಪಿನಿಂದ 'ರಾಜಕೀಯ ಘೋಷಣೆ' ಕೂಗಿದ ಘಟನೆಯ ಬಗ್ಗೆ ತುರ್ತು ಕ್ರಮಕ್ಕೆ ಒತ್ತಾಯಿಸಿ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾನುವಾರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿರುವ ರಮೇಶ್, ವಿಶೇಷ ಅಧಿವೇಶನ ಮುಕ್ತಾಯಗೊಂಡ ಸೆಪ್ಟೆಂಬರ್ 21ರಂದು ಮೇಲ್ಮನೆಯಲ್ಲಿನ 'ಆಘಾತಕಾರಿ ಘಟನೆ' ಕುರಿತು 'ತೀವ್ರ ಕಳವಳ' ಮತ್ತು 'ಆಳವಾದ ನಿರಾಸೆ' ವ್ಯಕ್ತಪಡಿಸಿದ್ದಾರೆ.

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಜನರ ಗುಂಪು ಸದನದ ಆವರಣದಲ್ಲಿ ಘೋಷಣೆಗಳನ್ನು ಕೂಗಿತು ಮತ್ತು ಗದ್ದಲ ಸೃಷ್ಟಿಸಿತು. ಈ ಘಟನೆಯು ಗದ್ದಲಕ್ಕೆ ಕಾರಣವಾಯಿತು ಮಾತ್ರವಲ್ಲದೆ ಸದನದೊಳಗೆ ನಿಯಮಗಳು ಮತ್ತು ನಿಬಂಧನೆಗಳ ಜಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಮತ್ತು ಅದರ ಮಾರ್ಷಲ್‌ಗಳ ಪರಿಶ್ರಮದ ಹೊರತಾಗಿಯೂ ಒಂದು ಗುಂಪು ರಾಜಕೀಯ ಘೋಷಣೆ ಕೂಗುವುದು ಹೇಗೆ ಸಾಧ್ಯವಾಯಿತು. ಈ ಘಟನೆಯು ಸಂಸತ್ತಿನ ಅಧಿವೇಶನಗಳಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿನ ವ್ಯಕ್ತಿಗಳ ನಿರೀಕ್ಷಿತ ನಡವಳಿಕೆಯನ್ನು ಸ್ಪಷ್ಟವಾಗಿ ವಿವರಿಸುವ ನಿಯಮ 264ರನ್ನು ಉಲ್ಲಂಘಿಸಿದೆ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ಮೂಲಗಳು ಉಲ್ಲೇಖಿವೆ.

50ಕ್ಕೂ ಹೆಚ್ಚು ಸಂದರ್ಶಕರು ಘೋಷಣೆಗಳನ್ನು ಕೂಗಲು ಸಾಧ್ಯವಾಯಿತು ಎಂಬ ಅಂಶವು 'ಆತಂಕಕಾರಿ ವಿಚಾರ'ವಾಗಿದೆ ಎಂದು ರಮೇಶ್ ಪತ್ರದಲ್ಲಿ ತಿಳಿಸಿದ್ದಾರೆ. 

ಈ ಗಂಭೀರ ನಿಯಮ ಉಲ್ಲಂಘನೆಗೆ ಪ್ರತಿಯಾಗಿ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.
ರಾಜ್ಯಸಭೆಯಲ್ಲಿ ಇಂತಹ ಉಲ್ಲಂಘನೆ ಹೇಗೆ ಸಾಧ್ಯವಾಯಿತು ಎಂಬುದನ್ನು ಗುರುತಿಸಲು ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡುವುದು ಅತ್ಯಗತ್ಯ. ಜವಾಬ್ದಾರಿಯುತ ವ್ಯಕ್ತಿಗಳು ಅಡ್ಡಿಪಡಿಸುವ ತಮ್ಮ ಕ್ರಿಯೆಗಳಿಗೆ ಜವಾಬ್ದಾರರಾಗಿರಬೇಕು. ಈ ಘಟನೆಯ ಹಿಂದೆ ಯಾವುದೇ ಸಂಸದ ಭಾಗಿಯಾಗಿರುವುದು ಕಂಡುಬಂದರೆ ಸೂಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಸಂಸತ್ತಿನ ಪಾವಿತ್ರ್ಯತೆ ಕಾಪಾಡಲು ನಾವು ಎಲ್ಲವನ್ನೂ ಮಾಡಬೇಕು ಎಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com