ಲೂಟಿ ಮಾಡಿದ 6,000 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ: ಗೊಗೊಯ್
ಗುವಾಹಟಿ: ಲೂಟಿ ಮಾಡಿದ 6,000 ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು 6 ಲಕ್ಷ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಅವರು ಬುಧವಾರ ಹೇಳಿದ್ದಾರೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಗೊಗೊಯ್, ಭದ್ರತಾ ಪಡೆಗಳಿಂದ ಲೂಟಿ ಮಾಡಿದ ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಮೇ 3 ರಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ರಾಜ್ಯದ ಸಾಮಾನ್ಯ ಜನರ ವಿರುದ್ಧ ಬಳಸಲಾಗುತ್ತಿದೆ ಎಂದಿದ್ದಾರೆ.
ಎರಡು ಕಡೆಯಿಂದ ಸಾಮರಸ್ಯದ ಬಗ್ಗೆ ಮಾತುಕತೆ ನಡೆಯದಿರುವಾಗ ಶಾಂತಿ ಮತ್ತು ಸಹಜತೆ ಹೇಗೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
"ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಕಾರ್ಯನಿರ್ವಹಣೆಯಿಂದ ಮೈಟೈಸ್ ಮತ್ತು ಕುಕಿಸ್ ಸಮುದಾಯ ಇಬ್ಬರೂ ಅತೃಪ್ತರಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮುಖ್ಯಮಂತ್ರಿಯನ್ನು ಸಂಪೂರ್ಣವಾಗಿ ಬೆಂಬಲಿಸಿರುವುದು ದುರದೃಷ್ಟಕರ ಎಂದ ಗೊಗೊಯ್, ಶಾಂತಿ ಸಮಿತಿಗಳಲ್ಲಿ ಸಿಎಂ ಉಪಸ್ಥಿತಿಯು ಶಾಂತಿ ಮಾತುಕತೆ ವಿಫಲವಾಗಲು ಕಾರಣ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ