ಬೆಂಗಳೂರು: ಮಿಚಾಂಗ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು ರಾಜಧಾನಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಚೆನ್ನೈ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ 33 ವಿಮಾನಗಳನ್ನು ಚೆನ್ನೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಕೆಐಎ) ಡೈವರ್ಟ್ ಮಾಡಲಾಗಿದೆ.
ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್(ಬಿಐಎಎಲ್) ಅಧಿಕಾರಿಗಳ ಪ್ರಕಾರ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ, ಸ್ಪೈಸ್ಜೆಟ್, ಇತಿಹಾದ್, ಲುಫ್ಥಾನ್ಸಾ ಮತ್ತು ಗಲ್ಫ್ ಏರ್ ಸೇರಿದಂತೆ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಚೆನ್ನೈನಿಂದ ಬೆಂಗಳೂರಿಗೆ ಡೈವರ್ಟ್ ಮಾಡಲಾಗಿದೆ ಮತ್ತು ಅನೇಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈ ವಿಮಾನ ನಿಲ್ದಾಣವನ್ನು ಸೋಮವಾರ ರಾತ್ರಿ 11 ಗಂಟೆಯವರೆಗೆ ಆಗಮನ ಮತ್ತು ನಿರ್ಗಮನ ಕಾರ್ಯಾಚರಣೆ ಬಂದ್ ಮಾಡಲಾಗಿದೆ.
ನಿರಂತರ ಮಳೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ 70 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಚೆನ್ನೈ ಮಾತ್ರವಲ್ಲ, ತಿರುಪತಿ, ವಿಶಾಖಪಟ್ಟಣಂ ಈ ಎಲ್ಲಾ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಲವಾರು ವಿಮಾನಗಳು ವಿಳಂಬವಾಗುತ್ತಿವೆ ಮತ್ತು ರದ್ದುಗೊಳ್ಳುತ್ತಿವೆ.
Advertisement